ಮೈಸೂರು: ಪೆನ್ಡ್ರೈವ್ ಹೆಸರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಂಧೆ ನಡೆಸುತ್ತಿದ್ದಾರೆ ಎಂದು ಸಚಿವ ಕೆ.ಎನ್.ರಾಜಣ್ಣ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ತಾಕತ್ತು ಇದ್ದರೆ ಅವರು ಈಗಲೇ ಪೆನ್ಡ್ರೈವ್ನಲ್ಲಿ ಏನಿದೆ ಎಂದು ತೋರಿಸಲಿ, ವಿಳಂಬ ಮಾಡುತ್ತಿರುವುದರ ಹಿಂದಿನ ಉದ್ದೇಶ ಏನು? ಪೆನ್ಡ್ರೈವ್ ಇಟ್ಕೊಂಡು ಅವರೇನಾದರು ದಂಧೆ ಮಾಡುತ್ತಾ ಇದ್ದಾರಾ ಎಂದು ಸಚಿವ ರಾಜಣ್ಣ ಪ್ರಶ್ನಿಸಿದರು.
ನನಗೆ ಆ ಪೆನ್ಡ್ರೈವ್ ವಿಚಾರದಲ್ಲಿ ಯಾವ ಕುತೂಹಲವೂ ಇಲ್ಲ. ಜಾತ್ರೆಗಳಲ್ಲಿ ಬುಟ್ಟಿ ಹಿಡ್ಕೊಂಡು ಹಾವಿದೆ ಹಾವಿದೆ ಅಂತ ಹೇಳುತ್ತಾರೆ. ಆದರೆ, ಬುಟ್ಟಿಯಲ್ಲಿ ಯಾವ ಹಾವೂ ಇರುವುದಿಲ್ಲ. ಅದೇ ರೀತಿ ಕುಮಾರಸ್ವಾಮಿ ಪೆನ್ಡ್ರೈವ್ ಹಿಡ್ಕೊಂಡು ಸುಮ್ಮನೆ ಓಡಾಡುತ್ತಿದ್ದಾರೆ. ಒಂದು ವೇಳೆ ಪೆನ್ಡ್ರೈವ್ನಲ್ಲಿ ಅಂತಹ ಮಹತ್ವದ ವಿಚಾರ ಇದ್ದರೆ ಬಿಡುಗಡೆ ಮಾಡಲು ತಡ ಏತಕ್ಕೆ? ನಾನು ಇದನ್ನು ಬ್ಲಾಕ್ಮೇಲ್ ಅಂತ ಹೇಳುವುದಿಲ್ಲ, ಮುಂದೆ ನಿಮಗೆ ಗೊತ್ತಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ನಡೆಯಲೇ ಇಲ್ಲವೇ? ಎಲ್ಲರ ಕಾಲದಲ್ಲೂ ವರ್ಗಾವಣೆ ನಡೆದಿದೆ ಎಂದು ಹೇಳಿದರು.
ಗೋ ಹತ್ಯೆ ಅನ್ನುವುದು ಅತ್ಯಂತ ಸೂಕ್ಷ್ಮ ವಿಚಾರ. ನಾನು ಹಸು ಕಡಿಯಬೇಕು ಎಂದು ಹೇಳುವುದಿಲ್ಲ, ಅದೇ ರೀತಿ ಕಡಿಯ ಬಾರದು ಎಂದೂ ಹೇಳುವುದಿಲ್ಲ. ಆದರೆ, ರೈತರ ಅನುಕೂಲಕ್ಕೆ ಕಾಯಿದೆ ಮಾಡಬೇಕಿದೆ. ಈ ವಿಚಾರದಲ್ಲಿ ಹಸು ಅಥವಾ ಮತ್ತೊಂದು ಎನ್ನುವ ಪ್ರಶ್ನೆ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರೊಂದಿಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಮಾಡುತ್ತೇವೆ. ನಾನು ಮಾಂಸ ತಿನ್ನುತ್ತೇನೆ, ನೀವು ಬೇಡ ಎಂದರೆ ನಿಲ್ಲಿಸುವುದಿಲ್ಲ ಎಂದರು.