Bengaluru 22°C
Ad

ಕೊಟ್ಟಿಗೆಯಲ್ಲಿ ದನ ಕಟ್ಟುವ ವಿಚಾರಕ್ಕೆ ಜಗಳ: ಕೊಲೆಯಲ್ಲಿ ಅಂತ್ಯ

ಕೊಟ್ಟಿಗೆಯಲ್ಲಿ ದನ ಕಟ್ಟುವ ವಿಚಾರಕ್ಕೆ ಜಗಳ ಶುರುವಾಗಿ ಯುವಕನೊರ್ವ ದೊಡ್ಡಮ್ಮನನ್ನೇ ಕುಡುಗೋಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ನಡೆದಿದೆ.

ಮೈಸೂರು: ಕೊಟ್ಟಿಗೆಯಲ್ಲಿ ದನ ಕಟ್ಟುವ ವಿಚಾರಕ್ಕೆ ಜಗಳ ಶುರುವಾಗಿ ಯುವಕನೊರ್ವ ದೊಡ್ಡಮ್ಮನನ್ನೇ ಕುಡುಗೋಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ನಡೆದಿದೆ.

ನಿಂಗಣ್ಣ ಎಂಬುವವರ ಪತ್ನಿ ವಿನೋದಾ (45) ಕೊಲೆಯಾದವರು. ನಿಂಗಣ್ಣ ಹಾಗೂ ಸ್ವಾಮಿ ಇಬ್ಬರು ಸಹೋದರರಾಗಿದ್ದು, ಕೊಟ್ಟಿಗೆಯಲ್ಲಿ ದನ ಕಟ್ಟುವ ವಿಚಾರಕ್ಕೆ ಆಗಾಗ ಜಗಳ ನಡೆಯುತ್ತಿತ್ತು. ಮತ್ತದೇ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳ ನಡೆದಿದ್ದು, ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿತು.

ಜಗಳದಲ್ಲಿ ಅಭಿಷೇಕ್ ತನ್ನ ದೊಡ್ಡಮ್ಮನ ಮೇಲೆ ಹಲ್ಲೆ ಮಾಡಿ ಹೊಟ್ಟೆಗೆ ಒದ್ದಿ ಕೆಳಗೆ ಬಿದ್ದವರಿಗೆ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾನೆ. ಗಂಭೀರ ಗಾಯಗೊಂಡ ವಿನೋದಾರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ದೊಡ್ಡಮ್ಮ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಆರೋಪಿ ಅಭಿಷೇಕ್ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಎಎಸ್‌ಪಿ ನಂದಿನಿ ಸೇರಿದಂತೆ ಇತರ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕವಲಂದೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Ad
Ad
Nk Channel Final 21 09 2023
Ad