ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿಯ 18ನೇ ಘಟಿಕೋತ್ಸವದಲ್ಲಿ 2020-22ನೇ ಸಾಲಿನಲ್ಲಿ ರಾಂಕ್ ಪಡೆದ 44 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ನಗದು ಬಹುಮಾನ ಪ್ರದಾನ ಮಾಡಲಾಯಿತು. 8722 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಸ್ವೀಕರಿಸಿದರು.
ಮುಕ್ತ ವಿವಿಯ 18ನೇ ಘಟಿಕೋತ್ಸವದಲ್ಲಿ ಅಧ್ಯಾಪಕಿ ಎನ್.ಭಾಗ್ಯಶ್ರೀ ಅವರು ಪಿಎಚ್.ಡಿ ಪದವಿ ಸ್ವೀಕರಿಸಿದ ಏಕೈಕ ವಿದ್ಯಾರ್ಥಿ ಎಂಬ ಗೌರವಕ್ಕೆ ಭಾಜನರಾದರು. ಡಾ.ಆನಂದಗೌಡ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ ಭಾರತದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ-ಕಾರ್ಯಾಚರಣೆ ಮತ್ತು ಮುಂದಿನ ನಿರೀಕ್ಷೆಗಳ ಮಹಾಪ್ರಬಂಧವನ್ನು ಮುಕ್ತ ವಿವಿ ರಾಜ್ಯಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿ ನೀಡಲಾಗಿದೆ. ಮೈಸೂರು ವಿವಿ ಸಂಜೆ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಭಾಗ್ಯ ಅವರು, ರಾಜ್ಯಪಾಲರಿಂದ ಪಿಎಚ್.ಡಿ ಪದವಿ ಸ್ವೀಕರಿಸಿದ್ದು, ನಮ್ಮ ಬದುಕಿನ ಅವಿಸ್ಮರಣೀಯ ಕ್ಷಣ ಎಂದು ಸಂತಸ ಹಂಚಿಕೊಂಡರು.
ಈ ವೇಳೆ ಹೈಕೋರ್ಟ್ ನ್ಯಾಯಾಧೀಶ ಅಶೋಕ್ ಎಸ್.ಕಿಣಗಿ ಮಾತನಾಡಿ, ನಾಗರಿಕತೆಯ ಪ್ರಾರಂಭದಿಂದಲೂ ಶಿಕ್ಷಣ ಸಾಮಾಜಿಕ ಪರಿವರ್ತನೆಗೆ ಪ್ರಬಲ ಸಾಧನವಾಗಿದೆ. ದೂರ ಶಿಕ್ಷಣದಿಂದಾಗಿ ಭಾರತದ ಶಿಕ್ಷಣ ವ್ಯವಸ್ಥೆಯು ಹೊಸ ಆಯಾಮವನ್ನು ಪಡೆದುಕೊಂಡಿದೆ ಎಂದು ಅಭಿಪ್ರಾಯಪಟ್ಟರು.
ಕೆಎಸ್ಒಯು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, 2023-24ನೇ ಸಾಲಿನಲ್ಲಿ ಹೊಸದಾಗಿ 13 ಆನ್ಲೈನ್ ಶಿಕ್ಷಣ ಕ್ರಮಗಳನ್ನು ಪ್ರಾರಂಭಿಸಲು ಸಿದ್ಧತೆ ವಾಡಿಕೊಳ್ಳಲಾಗಿದೆ. ಒಂದು ವರ್ಷದಲ್ಲಿ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು 15 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಅಂದಾಜು 231 ಸಂಶೋಧನಾ ಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಮಂಡಿಸಲಾಗಿದೆ ಎಂದು ಹೇಳಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ಕೆಲಸಗಾರರು, ಅವಕಾಶ ವಂಚಿತ, ಬಡ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣದ ಮೂಲಕ ಉನ್ನತ ಶಿಕ್ಷಣ ನೀಡುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾರ್ಯ ಪ್ರಶಂಸನೀಯ ಮತ್ತು ಉತ್ಕೃಷ್ಟ ಎಂದರು.
ಇದೇ ವೇಳೆ ಬೆಂಗಳೂರಿನ ಶ್ರೀ ಲಕ್ಷ್ಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಸಂಸ್ಥಾಪಕ ಮುಖ್ಯಸ್ಥ ಎನ್.ರಾಮಚಂದ್ರಯ್ಯ, ಆಕ್ಸ್ ಫರ್ಢ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ ಮುಖ್ಯಸ್ಥ ವೆಂಕಟಲಕ್ಷ್ಮೀ ನರಸಿಂಹರಾಜು ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಿರುವ ಕುರಿತು ವಿವಿಯಿಂದ ರಾಷ್ಟ್ರಪತಿ ಭವನಕ್ಕೆ ಪತ್ರ ವ್ಯವಹಾರ ಮಾಡಲಾಗಿದ್ದು, ಕಚೇರಿಯಿಂದ ಒಪ್ಪಿಗೆ ಪತ್ರ ಬರುತ್ತಿದ್ದಂತೆ ರಾಜಭವನದಲ್ಲಿ ಸೋಮವಾರ ರಾಜ್ಯಪಾಲರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುತ್ತದೆ.
ವಿವಿಯ ಸಮಕುಲಾಧಿಪತಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸಚಿವರಾದ ಬಳಿಕ ನಡೆಯುತ್ತಿರುವ ಮೊದಲನೇ ಘಟಿಕೋತ್ಸವಕ್ಕೆ ಗೈರಾಗಿದ್ದರು.