ಮೈಸೂರು: ಬರಹಗಾರ ತನ್ನ ಅನುಭವಕ್ಕೆ ಬಾರದ ವಿಷಯಗಳನ್ನು ಬರೆಯಬಾರದು ಎಂದು ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಸಲಹೆ ನೀಡಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹೊಯ್ಸಳ ಕನ್ನಡ ಸಂಘ ಹಾಗೂ ಸವಿಗನ್ನಡ ಪತ್ರಿಕಾ ಬಳಗದಿಂದ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಡಾ.ಎಂ.ಎಸ್.ವಿಜಯಾ ಹರನ್ ಬರೆದ ವಿಶ್ವ ಸಾಹಿತಿ ಭೈರಪ್ಪ: ಅನುವಾದಕರ ಅನುಭವಗಳು ಹಾಗೂ ಆನಂದರ ಬದುಕು ಬರಹ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಲೇಖಕ ತನಗೆ ಗೊತ್ತಿರದ ವಿಚಾರಗಳನ್ನು ಕೃತಿ ರೂಪಕ್ಕೆ ತರಲು ಹೋದರೆ ಅದು ಕೃತಿಯ ಅಂದಗೆಡಿಸುತ್ತದೆ ಎಂದು ಹೇಳಿದರು.
ವಿದ್ವಾಂಸರು, ಸಾಹಿತಿಗಳ ಜತೆಗಿನ ಒಡನಾಟ ಹಾಗೂ ಅವರ ನಡುವಿನ ಚರ್ಚೆ, ಒಡನಾಟ ಬರಹಗಾರನ ಬರಹ ಪಕ್ವತೆಯನ್ನು ಪಡೆಯಲು ಪೂರಕವಾಗಿರಲಿದೆ ಎಂದರು. ಯಾವುದೇ ಸಾಹಿತಿಯ ಬರಹಗಳನ್ನು ಅನುವಾದ ಅಥವಾ ವಿಮರ್ಶೆ ಮಾಡುವಾಗ ಅವರ ಹಿನ್ನಲೆಯಲ್ಲಿ ತಿಳಿದುಕೊಂಡಿದ್ದರೆ ಮಾತ್ರ ಬರಹದಲ್ಲಿ ತಾಜಾತನ ಕಾಣಬಹುದು. ಆಗ ಓದುಗನಿಗೆ ಸಾಹಿತ್ಯದ ಬಗ್ಗೆ ಆಸಕ್ತಿ ಹುಟ್ಟುತ್ತದೆ. ಕೃತಿಯನ್ನು ಸಹೃದಯತೆಯಿಂದ ವಿಮರ್ಶಾತ್ಮಕವಾಗಿ ಬರೆದಾಗ ಮಾತ್ರ ಅವು ಓದುಗನ ಮನಮುಟ್ಟುವಲ್ಲಿ ಯಶಸ್ವಿಯಾಗುತ್ತದೆ ಎಂದರು.
ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕ ಡಾ.ಸಿ.ನಾಗಣ್ಣ ಮಾತನಾಡಿ, ಭೈರಪ್ಪ ತನ್ನ ಬದುಕಿನಲ್ಲಿ ಕಠಿಣ ಹಾದಿ ತುಳಿದಿದ್ದಾರೆ. ಅವರು ಬರೆದಿರುವ ಸುಮಾರು 19ಕಾದಂಬರಿಗಳು ವಿವಿಧ ಭಾಷೆಗಳಿಗೆ ಅನುವಾದ ಆಗಿವೆ. ಆ ಅನುವಾದಕರನ್ನೆಲ್ಲಾ ಸಂಪರ್ಕಿಸಿ ಅವರ ಅನುಭವವನ್ನು ಪುಸ್ತಕ ರೂಪಕ್ಕಿಳಿಸಿರುವ ಲೇಖಕಿಯ ಸಾಹಸ ಅಭಿನಂದನಾರ್ಹ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಂಸ್ಕೃತ ವಿದ್ವಾಂಸ ಡಾ.ಎಚ್.ವಿ.ನಾಗರಾಜರಾವ್, ಮೂಗೂರು ನಂಜುಂಡ ಸ್ವಾಮಿ, ಸಂಘದ ಪ್ರಧಾನ ಕಾರ್ಯದರ್ಶಿ ರಂಗನಾಥ್ ಮೈಸೂರು, ಕಾರ್ಯದರ್ಶಿ ಚೀಲೂರು ಚಂದ್ರಶೇಖರ್, ಜಂಟಿ ಕಾರ್ಯದರ್ಶಿ ಕೆಂಪಣ್ಣ ಇದ್ದರು.