ಭರತನಾಟ್ಯ, ಯಕ್ಷಗಾನ, ಸಂಗೀತ ಹೀಗೆ ನಾನಾ ಪ್ರಕಾರಗಳಲ್ಲೂ ವಿಶೇಷ ಅಭಿರುಚಿ ಹೊಂದಿರುವ ಡಾ.ಭಟ್, ಸ್ವತಃ ನಾಟ್ಯ ಕಲಾವಿದನಾಗಿ, ಯಕ್ಷಗಾನ ಕಲಾವಿದನಾಗಿ ಬಣ್ಣ ಹಚ್ಚಿದವರು. ಇದಲ್ಲದೆ ಆಪ್ತಸಮಾಲೋಚಕರಾಗಿ, ಮಾನವ ಸಂಪನ್ಮೂಲ ತರಬೇತುದಾರಾಗಿಯೂ ರಾಜ್ಯದ ವಿವಿಧ ಭಾಗಗಳಲ್ಲಿ ಸೇವೆಸಲ್ಲಿಸುತ್ತಿದ್ದಾರೆ.
ಬಾಲಕೃಷ್ಣ ಬೋರ್ಕರ್ ಪುತ್ತೂರಿನ ಕೋಡಿಂಬಾಡಿಯವರಾದ ಇವರು ಸಾಮಾಜಿಕ, ಧಾರ್ಮಿಕ, ಸಹಕಾರಿ ಹಾಗೂ ರಾಜಕೀಯ ಕ್ಷೇತ್ರಕ್ಕೆ ತಮ್ಮನ್ನು ತಾವು ಅಪಿಸಿಕೊಂಡವರು. 1976-77 ರ ಹೊತ್ತಿನಲ್ಲಿ ಸಾರ್ವಜನಿಕ ಕ್ಷೇತ್ರಕ್ಕೆ ಅಡಿಯಿಟ್ಟು ಪುತ್ತೂರಿನಲ್ಲಿ ಆಗ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಮಾಜಿ ಶಾಸಕ ರಾಮ ಭಟ್ಟರ ಮಾರ್ಗದರ್ಶನದೊಂದಿಗೆ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು. ಡಿ ಕಾರ್ಮಿಕ ಮಹಿಳೆಯರ ಶೋಷಣೆ ವಿರುದ್ಧ ಧ್ವನಿಯೆತ್ತುವ ಮೂಲಕ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದ ಕೀರ್ತಿ ಇವರದ್ದು. ತಾಲೂಕು ಮಾರ್ಕೆಟಿಂಗ್ ಸೊಸೈಟಿಯ ನಿರ್ದೇಶಕರಾಗಿ, ಪಿಎಲ್ಡಿ ಬ್ಯಾಂಕಿನ ನಿರ್ದೇಶಕ ಹಾಗೂ ಅಧ್ಯಕ್ಷರಾಗಿ, ಜನತಾ ಬಝಾರ್ನ ಜಿಲ್ಲಾಧ್ಯಕ್ಷರಾಗಿ, ಜಿಲ್ಲಾ ಪಂಚಾಯತ್ ಸದಸ್ಯರಾಗಿ ಹಾಗೂ ಒಂದು ವರ್ಷದ ಅವಧಿಗೆ ಅಧ್ಯಕ್ಷರಾಗಿ, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾಗಿ ಮಾತ್ರವಲ್ಲದೆ ಇನ್ನೂ ಅನೇಕ ಸಂಘಟನೆ, ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಿದ ಅಪಾರ ಅನುಭವ ಇವರಿಗಿದೆ. ಇವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಿಎಲ್ಡಿ ಬ್ಯಾಂಕ್ಗೆ ರಾಷ್ಟçಪ್ರಶಸ್ತಿ ದೊರೆತಿತ್ತು. ಈವರೆಗೆ ಕರ್ನಾಟಕದಲ್ಲಿ ಪಿಎಲ್ಡಿ ಬ್ಯಾಂಕ್ಗೆ ದೊರೆತ ಏಕೈಕ ರಾಷ್ಟçಪ್ರಶಸ್ತಿ ಇವರದ್ದಾಗಿದೆ.
ವಿಶ್ವಹಿಂದೂ ಪರಿಷತ್ನಲ್ಲಿ ಕಾರ್ಯನಿರ್ವಹಿಸುತ್ತಾ 1975ರ ವೇಳೆಗೆ ಕೋಡಿಂಬಾಡಿಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ, 78ರಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ, 85ರ ತರುವಾಯ ಗಣೇಶೋತ್ಸವ ಹೀಗೆ ಸಾಮೂಹಿಕ ಆಚರಣೆಯ ಕಲ್ಪನೆಯನ್ನು ಒಡಮೂಡಿಸಿದವರು. 1982ರಲ್ಲಿ 82 ಕಡೆಗಳಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜಾ ಆಚರಣೆ ಜಾರಿಗೆ ತಂದ ಮುಂದಾಳುವಾಗಿ ಗುರುತಿಸಿಕೊಂಡವರು. ಜತೆಗೆ ಸ್ಥಳೀಯ ದೇವಸ್ಥಾನಗಳ ಅಭಿವೃದ್ಧಿಯಲ್ಲೂ ತನ್ನದಾದ ಕೊಡುಗೆಗಳನ್ನು ಒದಗಿಸಿಕೊಟ್ಟಿದ್ದಾರೆ.