ಪುತ್ತೂರು : ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನಗರದ ನೆಲ್ಲಿಕಟ್ಟೆಯಲ್ಲಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯದ ನೂತನ ಪ್ರಾಂಶುಪಾಲರಾಗಿ ಎಂ.ಸತ್ಯಜಿತ್ ಉಪಾಧ್ಯಾಯ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಯಾಗಿ ಗಣೇಶ್ ಪ್ರಸಾದ್ ಎ ಮತ್ತು ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ರಾಕೇಶ್ ಕುಮಾರ್ ಕಮ್ಮಜೆ ನಿಯುಕ್ತಿಗೊಂಡಿದ್ದಾರೆ. ಈ ಸಂಬಂಧವಾಗಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಪ್ರಕಟಣೆ ನೀಡಿದ್ದಾರೆ.
ಸತ್ಯಜಿತ್ ಉಪಾಧ್ಯಾಯ: ಸುಮಾರು ಹತ್ತು ವರ್ಷಗಳ ಬೋಧನಾನುಭವ ಹೊಂದಿರುವ ಇವರು ಕಳೆದ ಏಳು ವರ್ಷಗಳಿಂದ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಭೌತಶಾಸ್ತ್ರ ಉಪನ್ಯಾಸಕರಾಗಿ ಹಾಗೂ 2016ರಿಂದ ಸಂಸ್ಥೆಯ ಉಪಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೂಲತಃ ಸುಳ್ಯದ ನೆಲ್ಲೂರು ಕೆಮ್ರಾಜೆ ಗ್ರಾಮದ ಅಡಿಕೆಹಿತ್ತಿಲಿನವರಾದ ಇವರು 2012ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಧ್ಯಾಪನ, ಪ್ರವಾಸ, ಕ್ವಿಝ್ ಆಯೋಜನೆಯೇ ಮೊದಲಾದ ನಾನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತೆಯೇ ವಿದ್ಯಾರ್ಥಿಗಳನ್ನು ಜೆಇಇ, ನೀಟ್, ಸಿಇಟಿ ಮೊದಲಾದ ಪರೀಕ್ಷೆಗಳಿಗೆ ಸಿದ್ಧಪಡಿಸುವುದರಲ್ಲಿಯೂ ಇವರು ಮೂಂಚೂಣಿಯ ಉಪನ್ಯಾಸಕರಾಗಿ ಗುರುತಿಸಿಕೊಂಡಿದ್ದಾರೆ. ಅಡಿಕೆಹಿತ್ತಿಲಿನಲ್ಲಿ ಕೃಷಿಕರಾಗಿರುವ ಎಂ.ಶಂಕರನಾರಾಯಣ ಉಪಾಧ್ಯಾಯ ಹಾಗೂ ಜಯಲಕ್ಷ್ಮೀ ಎಸ್ ಉಪಾಧ್ಯಾಯ ದಂಪತಿ ಇವರ ಹೆತ್ತವರು.
ಗಣೇಶ್ ಪ್ರಸಾದ್ ಎ : ಅಂಬಿಕಾ ಪದವಿ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿರುವ ಇವರು ಹದಿಮೂರು ವರ್ಷಗಳ ಬೋಧನಾನುಭವ ಹೊಂದಿದವರು. ಮಂಗಳೂರು ವಿಶ್ವವಿದ್ಯಾನಿಲಯದಿಂದ 2008ರಲ್ಲಿ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಕಳೆದ ಆರು ತಿಂಗಳುಗಳಿಂದ ಅಂಬಿಕಾ ಪದವಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಆಡಳಿತ ನಿರ್ವಹಣೆಯಲ್ಲೂ ಅಪಾರ ಅನುಭವ ಹೊಂದಿದ್ದಾರೆ. ಪದವಿ ಕಾಲೇಜಿನ ಅಗತ್ಯತೆಗಳಾದ ನ್ಯಾಕ್ಗೆ ಸಂಬಂಧಿಸಿದ ತಯಾರಿ, ವಿಶ್ವವಿದ್ಯಾನಿಲಯ ಸಂಬಂಧಿ ಕಾರ್ಯಗಳು ಮಾತ್ರವಲ್ಲದೆ ಕಛೇರಿ ನಿರ್ವಹಣೆ ಮೊದಲಾದ ವಿಷಯಗಳಲ್ಲಿ ಪರಿಣತಿ ಹೊಂದಿದ್ದಾರೆ.
ಅತ್ಯುತ್ತಮ ಇಂಗ್ಲಿಷ್ ಉಪನ್ಯಾಸಕರಾಗಿ ಗುರುತಿಸಿಕೊಂಡಿರುವ ಇವರು ಅನೇಕ ಮಂದಿ ವಿದ್ಯಾರ್ಥಿಗಳು ಕಷ್ಟವೆಂದುಕೊಳ್ಳುವ ಇಂಗ್ಲಿಷ್ ಪಠ್ಯವನ್ನು ಸುಲಭವೆನಿಸುವಂತೆ ತೋರಿಸಿಕೊಟ್ಟಿದ್ದಾರೆ. ಪ್ರಯೋಗಶೀಲ ಪಠ್ಯ, ಸೃಜನಶೀಲ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಪತ್ರಿಕೋದ್ಯಮದಲ್ಲೂ ವಿಶೇಷ ಆಸಕ್ತಿ ಹೊಂದಿರುವ ಇವರು ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ 2020ರಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಪ್ರಸ್ತುತ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಇಂಗ್ಲಿಷ್ ವಿಷಯದ ಕುರಿತಾಗಿ ಪಿಎಚ್ಡಿ ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಇವರು ಮೂಲತಃ ಕೇರಳದ ಮಂಜೇಶ್ವರ ಸಮೀಪದ ಕೋಳ್ಯೂರಿನ ಎಡಕೋಡ್ಲು ಸದಾಶಿವ ಭಟ್ ಹಾಗೂ ಸೀತಾಲಕ್ಷ್ಮಿ ದಂಪತಿಯ ಪ್ರಥಮ ಪುತ್ರ.
ರಾಕೇಶ್ ಕುಮಾರ್ ಕಮ್ಮಜೆ : ಅಂಬಿಕಾ ಪದವಿ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿರುವ ಇವರು ಹನ್ನೆರಡು ವರ್ಷಗಳ ಬೋಧನಾನುಭವ ಹೊಂದಿದವರು. ಮೈಸೂರು ವಿಶ್ವವಿದ್ಯಾನಿಲಯದಿಂದ 2009ರಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಮೊದಲ ರ್ಯಾಂಕ್ನೊಂದಿಗೆ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಕಳೆದ ಎಂಟು ತಿಂಗಳುಗಳಿಂದ ಅಂಬಿಕಾ ಪದವಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಈ ಹಿಂದೆ ಪದವಿ ಹಾಗೂ ಸ್ನಾತಕೋತ್ತರ ಪದವಿಗಳೆರಡನ್ನೂ ಮುಖ್ಯಸ್ಥನಾಗಿ ನಿರ್ವಹಿಸಿದ ಅನುಭವ ಹೊಂದಿದವರು. ಅನೇಕ ಮಂದಿ ಉತ್ಕಷ್ಟ ಪತ್ರಕರ್ತರನ್ನು ರೂಪಿಸಿ ಮಾಧ್ಯಮವಲಯಕ್ಕೆ ನೀಡಿದ ಕೀರ್ತಿ ಇವರದ್ದು.
ಸೃಜನಶೀಲ ಯೋಚನೆ, ಕಾರ್ಯಕ್ರಮಗಳ ಮೂಲಕ ಪುತ್ತೂರಿನಲ್ಲಿ ಪತ್ರಿಕೋದ್ಯಮ ಶಿಕ್ಷಣವನ್ನು ಬೆಳೆಸಿದ ಅನುಭವ ಹೊಂದಿರುವ ಇವರು ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಅಧ್ಯಯನ ನಡೆಸುತ್ತಿದ್ದ ಸಂದರ್ಭದಲ್ಲಿ ರಾಜ್ಯಮಟ್ಟದ ಪತ್ರಿಕೆಯೊಂದಕ್ಕೆ ಉಜಿರೆ – ಧರ್ಮಸ್ಥಳ ವ್ಯಾಪ್ತಿಯಲ್ಲಿ ವರದಿಗಾರನಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಬರವಣಿಗೆ, ಭಾಷಣ, ಯಕ್ಷಗಾನ, ಕೃಷಿ, ಹಾಸ್ಯ ಮಾತು ಮೊದಲಾದ ಹಲವು ವಿಷಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯದ ಕುರಿತಾಗಿ ಅಪಾರ ಆಸಕ್ತಿ ಹೊಂದಿದ್ದು, 2020ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಕೇಂದ್ರದಿಂದ ಕನ್ನಡ ಎಂ.ಎ ಪದವಿಯನ್ನೂ ಪಡೆದುಕೊಂಡಿದ್ದಾರೆ.
ಇವರು ಮೂಲತಃ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ದಿ.ಚಂದ್ರಶೇಖರ ಭಟ್ ಹಾಗೂ ಜ್ಯೋತಿಲಕ್ಷ್ಮೀ ದಂಪತಿಯ ದ್ವಿತೀಯ ಪುತ್ರ.