ಇಸ್ಲಾಮಾಬಾದ್: ಪಾಕಿಸ್ತಾನದ ಕಾಶ್ಮೋರ್ ಜಿಲ್ಲೆಯಲ್ಲಿ ಹಿಂದೂ ಸಮುದಾಯದ ಸದಸ್ಯರನ್ನು ಗುರಿಯಾಗಿ ಸುಲಿಗೆ, ಅಪಹರಣ ಕೃತ್ಯಗಳು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಕಾಶ್ಮೋರ್ನ ಹಿಂದೂ ವ್ಯಾಪಾರಿಗಳು ಮತ್ತು ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಹಿಂದೂ ಸಮುದಾಯವು ಸದಸ್ಯರು ಸಿಂಧೂ ಹೆದ್ದಾರಿಯನ್ನು ಕನಿಷ್ಠ 34 ಗಂಟೆಗಳ ಕಾಲ ತಡೆದು ಪ್ರತಿಭಟಿಸಿದರು.
ಇದರಿಂದ ಬಲೂಚಿಸ್ತಾನ್ ಮತ್ತು ಪಂಜಾಬ್ನಿಂದ ಸಿಂಧ್ ಪ್ರಾಂತ್ಯದ ರಸ್ತೆ ಮಾರ್ಗ ಸ್ಥಗಿತಗೊಂಡಿತು. ಪ್ರತಿಭಟನಕಾರರು ತಮಗೆ ನ್ಯಾಯ ಒದಗಿಸುವಂತೆ ಘೋಷಣೆಗಳನ್ನು ಕೂಗಿದರು. ನಮ್ಮ ಮಕ್ಕಳು, ವ್ಯಾಪಾರಿಗಳನ್ನು ದುಷ್ಕರ್ಮಿಗಳು ಅಪಹರಿಸುತ್ತಿದ್ದಾರೆ. ಆದರೆ ಅಧಿಕಾರಿಗಳು, ಮತ್ತು ಸರ್ಕಾರದಿಂದ ಯಾವುದೇ ರಕ್ಷಣೆ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಶ್ಮೂರ್ನ ನಮ್ಮ ಹಿಂದೂ ವ್ಯಾಪಾರಿಯ ಮಗ ಸಾಗರ್ ಕುಮಾರ್ನನ್ನು ದುಷ್ಕರ್ಮಿಗಳು ಅಪಹರಿಸಿ 20 ದಿನಗಳು ಕಳೆದಿವೆ. ಸಾಗರ್ಗೆ ಅಪಹರಣಕಾರರು ಚಿತ್ರಹಿಂಸೆ ನೀಡಿ ಹಲ್ಲೆ ಮಾಡಿರುವ ವಿಡಿಯೋ ನಮಗೆ ಸಿಕ್ಕಿದೆ. ಅವನನ್ನು ಬಿಡುಗಡೆ ಮಾಡಲು ಕೋಟ್ಯಾಂತರ ಹಣ ಕೇಳುತ್ತಿದ್ದಾರೆ ಅಷ್ಟು ದೊಡ್ಡ ಮೊತ್ತವನ್ನು ಹೇಗೆ ಕೊಡಲು ಸಾಧ್ಯ. ಸರ್ಕಾರದ ನಿರ್ಲಕ್ಷ್ಯವೇ ಇಂತಹ ಸ್ಥಿತಿಗೆ ಕಾರಣ ಎಂದು ಸಮಾಜ ಸೇವಕ ನರೇನ್ ದಾಸ್ ಭೀಲ್ ಕಣ್ಣೀರು ಹಾಕಿದರು.
ಕಳೆದ ಎರಡು ತಿಂಗಳ ಅವಧಿಯಲ್ಲಿ ಹಿಂದೂ ಸಮುದಾಯದ ಕನಿಷ್ಠ 40 ಜನರನ್ನು ಅಪಹರಿಸಲಾಗಿದೆ. ಕ್ರಮ ಕೈಗೊಳ್ಳುವಂತೆ ನಾವು ಪೊಲೀಸ್ ಅಧಿಕಾರಿಗಳ ಹಿಂದೆ ಓಡುತ್ತಿದ್ದೇವೆ ಆದರೆ ಅವರು ಈ ವಿಷಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಿಂದೂ ಸಮುದಾಯವು ಕಾಶ್ಮೋರ್ ಜಿಲ್ಲೆಯಲ್ಲಿ ದಶಕಗಳಿಂದ ವಾಸಿಸುತ್ತಿದೆ. ನಾವು ಎಲ್ಲರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ಆದರೆ ನಮ್ಮ ಸಮುದಾಯ ಸದಸ್ಯರನ್ನೇ ಗುರಿಯಾಗಿಸಿ ಅಪಹರಣ ನಡೆಸಲಾಗುತ್ತಿದೆ ಎಂದು ಹೇಳಿದರು.
ಕಾಶ್ಮೋರ್ನಲ್ಲಿನ ಪ್ರತಿಭಟನೆಗಳಿಗೆ ಬೆಂಬಲ ವ್ಯಕ್ತಪಡಿಸಿ ಸಿಂಧ್ ಪ್ರಾಂತ್ಯದ ಕರಾಚಿಯಲ್ಲಿಯೂ ಕೂಡ ನೂರಾರು ಹಿಂದೂ ಸಮುದಾಯದ ಜನರು ಪ್ರತಿಭಟನೆ ನಡೆಸಿದರು. ಕ್ಲಿಫ್ಟನ್ನ “ಟೀನ್ ತಲ್ವಾರ್” ವೃತ್ತದಲ್ಲಿ ಜಮಾಯಿಸಿದ ಹಿಂದು ಜನರು ಪ್ರಾಂತೀಯ ಸರ್ಕಾರದ ವೈಫಲ್ಯ ಕುರಿತು ಘೋಷಣೆ ಕೂಗಿದರು.
“ಕಾಶ್ಮೋರ್ನ ತುಲ್ಹ್ನಿಂದ ಹಿಂದೂ ಕುಟುಂಬಗಳು ವಲಸೆ ಹೋಗಲು ಕಾನೂನು ಮತ್ತು ಸುವ್ಯವಸ್ಥೆ ವೈಫಲ್ಯವೇ ಕಾರಣ. ಹಿಂದೂ ಹುಡುಗಿಯರ ಅಪಹರಣ ಮತ್ತು ಬಲವಂತದ ಮತಾಂತರದ ಪ್ರಕರಣಗಳು ಹೆಚ್ಚಾದ ಕಾರಣ ಹಿಂದೂ ಕುಟುಂಬಗಳು ಸಿಂಧ್ನಿಂದ ಭಾರತಕ್ಕೆ ಹೋಗಲು ಆರಂಭಿಸಿವೆ ಎಂದು ಸುಮೀತ್ ರಾಥೋರ್ ಹೇಳಿದರು.