ಇಸ್ಲಾಮಾಬಾದ್: ತೀರ್ಥಯಾತ್ರೆ ಉದ್ದೇಶದಿಂದ ಭಾರತಕ್ಕೆ ಭೇಟಿ ನೀಡಲು ಉದ್ದೇಶಿಸಿದ್ದ 190 ಹಿಂದುಗಳನ್ನು ಭಾರತಕ್ಕೆ ತೆರಳದಂತೆ ವಾಘ ಗಡಿಯಲ್ಲಿ ಪಾಕಿಸ್ತಾನದ ವಲಸೆ ಅಧಿಕಾರಿಗಳು ತಡೆದ ಘಟನೆ ನಡೆದಿದೆ.
ನೆರೆಯ ದೇಶಕ್ಕೆ ನೀಡುತ್ತಿರುವ ಭೇಟಿಯ ಉದ್ದೇಶದ ಬಗ್ಗೆ ಅಧಿಕಾರಿಗಳಿಗೆ ತೃಪ್ತಿಕರ ಪ್ರತಿಕ್ರಿಯೆಯನ್ನು ನೀಡಲು ವಿಫಲವಾದ ಕಾರಣ ಭಾರತಕ್ಕೆ ಪ್ರಯಾಣಿಸದಂತೆ ಹಿಂದುಗಳನ್ನು ತಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಂಧ್ ಪ್ರಾಂತ್ಯದಿಂದ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ವಿವಿಧ ಹಿಂದೂ ಕುಟುಂಬಗಳು ಧಾರ್ಮಿಕ ತೀರ್ಥಯಾತ್ರೆಗಾಗಿ ವೀಸಾದಲ್ಲಿ ಭಾರತಕ್ಕೆ ಹೋಗಲು ಗಡಿಯನ್ನು ತಲುಪಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಆದರೆ ವಲಸೆ ಅಧಿಕಾರಿಗಳಿಗೆ ತೃಪ್ತಿಕರ ಉತ್ತರ ನೀಡದ ಕಾರಣ ಭಾರತಕ್ಕೆ ತೆರಳಲು ಅನುಮತಿ ದೊರೆತಿಲ್ಲ.
ಮೂಲಗಳ ಪ್ರಕಾರ, ಹಿಂದೂ ಕುಟುಂಬಗಳು ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು. ಪಾಕಿಸ್ತಾನದಲ್ಲಿರುವ ಹಿಂದು ಕುಟುಂಬಗಳು ಧಾರ್ಮಿಕ ತೀರ್ಥಯಾತ್ರೆಗೆ ವೀಸಾಗಳನ್ನು ಪಡೆದು ಭಾರತಕ್ಕೆ ಪ್ರಯಾಣ ಬೆಳೆಸಿ ದೀರ್ಘಕಾಲ ಭಾರತದಲ್ಲಿ ಉಳಿಯುತ್ತಾರೆ.
“ಭಾರತಕ್ಕೆ ಹೋದ ನಂತರ, ಈ ಜನರು ಗುಡಿಸಲುಗಳಲ್ಲಿ ವಾಸಿಸುತ್ತಾರೆ. ಅಲ್ಲದೆ ಸಂಕಷ್ಟಮಯ ಜೀವನ ನಡೆಸುತ್ತಾರೆ. ಆದರೆ ಅವರು ಪಾಕಿಸ್ತಾನ ಸುರಕ್ಷಿತವಾಗಿಲ್ಲ ಎಂದು ದೂಷಿಸುತ್ತಾರೆ” ಎಂದು ಮೂಲವೊಂದು ತಿಳಿಸಿದೆ, ಪ್ರಸ್ತುತ ಹೆಚ್ಚಿನ ಸಂಖ್ಯೆಯ ಪಾಕಿಸ್ತಾನಿ ಹಿಂದೂಗಳು ರಾಜಸ್ಥಾನ ಮತ್ತು ದೆಹಲಿಯಲ್ಲಿ ಅಲೆಮಾರಿಗಳಾಗಿ ವಾಸಿಸುತ್ತಿದ್ದಾರೆ.