ಕಾಬೂಲ್ : ತಾಲಿಬಾನ್ ಆಡಳಿತದಿಂದ ಅಲ್ಲಿನ ಜನತೆಗೆ ಉಸಿರಾಡಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಇದರ ಜೊತೆಗೆ ಇತರ ದೇಶಗಳಿಗೂ ಆತಂಕ ಹೆಚ್ಚಾಗುತ್ತಿದೆ. ಪಾಕಿಸ್ತಾನ ಜೊತೆ ಸೇರಿ ಭಾರತದ ಮೇಲೆ ಉಗ್ರ ದಾಳಿ ಸಂಭವ ಹೆಚ್ಚಾಗಿದೆ. ಇದೀಗ ತಾಲಿಬಾನ್ ಉಗ್ರರು ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಆಫ್ಘಾನಿಸ್ತಾನ ಗಡಿಯುದ್ದಕ್ಕೂ ಆತ್ಮಾಹುತಿ ಬಾಂಬರ್ ಸೇನೆ ನಿಯೋಜಿಸಿದೆ.
ಆಫ್ಘಾನಿಸ್ತಾನದ ಬದಾಕ್ಷನ್ ಪ್ರಾಂತ್ಯದಲ್ಲಿನ ಗಡಿಯಲ್ಲಿ ತಾಲಿಬಾನ್ ಉಗ್ರರ ಸುಸೈಡ್ ಬಾಂಬರ್ಸ್ ನಿಯೋಜಿಸಲ್ಪಟ್ಟಿದ್ದಾರೆ. ಬದಾಕ್ಷನ್ ಪ್ರಾಂತ್ಯದ ತಜಕಿಸ್ತಾನ ಹಾಗೂ ಚೀನಾ ಗಡಿಯಲ್ಲಿ ಇದೀಗ ತಾಲಿಬಾನ್ ಉಗ್ರರ ಆತ್ಮಾಹುತಿ ಬಾಂಬರ್ ಮೂಲಕ ದಾಳಿಗೆ ಸಜ್ಜಾಗಿದ್ದಾರೆ. ಈ ಕುರಿತು ಬದಾಕ್ಷನ್ ಪ್ರಾಂತ್ಯದ ಗವರ್ನರ್ ಮುಲ್ಲಾ ನಿಸಾರ್ ಅಹಮ್ಮದ್ ಸುದ್ದಿಗೋಷ್ಠಿ ಮೂಲಕ ಬಹಿರಂಗ ಪಡಿಸಿದ್ದಾರೆ.
ತಾಲಿಬಾನ್ ಆಡಳಿತ ಗಡಿಯಲ್ಲಿ ಆತ್ಮಾಹುತಿ ಬಾಂಬರ್ ನಿಯೋಜಿಸುವ ಮೂಲಕ ಆಫ್ಘಾನಿಸ್ತಾನ ಗಡಿಯಲ್ಲಿ ಮತ್ತಷ್ಟು ವಿದ್ವಂಸಕ ಕೃತ್ಯ ಎಸಗಲು ತಾಲಿಬಾನ್ ಸಜ್ಜಾಗಿದೆ. ಸುಸೈಡ್ ಬಾಂಬರ್ ಪಡೆಗೆ ಲಷ್ಕರ್ ಇ ಮನ್ಸೂರಿ ಸೈನ್ಯ ಎಂದು ಹೆಸರಿಡಲಾಗಿದೆ. ಈ ಪಡೆ ಶತ್ರು ದೇಶ ಅಥವಾ ಗಡಿಯಲ್ಲಿ ಅತಿಕ್ರಮಣ ಪ್ರವೇಶಿಸುವರ ವಿರುದ್ಧ ಹೋರಾಡುವ ಬದಲು, ಹಿಂದಿನ ಆಫ್ಘಾನಿಸ್ತಾನ ಸರ್ಕಾರದ ಸೇನೆ ವಿರುದ್ಧ ಆತ್ಮಾಹುತಿ ದಾಳಿ ಮಾಡಲಿದೆ.
ಈ ಆತ್ಮಾಹುತಿ ಬಾಂಬರ್ ಪಡೆಯಿಂದಲೆ ಅಮೆರಿಕಾ ಸೇನೆ ವಿರುದ್ಧ ತಾಲಿಬಾನ್ ಗೆಲುವು ಸಾಧಿಸಿದೆ. ಅಮೆರಿಕದ ಸೇನಾ ನೆಲೆಯನ್ನ ಈ ಬಾಂಬರ್ ಪಡೆ ಸ್ಫೋಟಿಸಿದೆ. ಈ ಪಡೆಗೆ ಭಯದ ಅರಿವಿಲ್ಲ, ಆದೇಶವನ್ನು ಚಾಚೂ ತಪ್ಪದೆ ಪಾಲಿಸುವ ಈ ಬಾಂಬರ್ ಪಡೆ ತಾಲಿಬಾನ್ ಆಡಳಿತಕ್ಕೆ ಹೆಚ್ಚಿನ ಯಶಸ್ಸು ತಂದುಕೊಡಲಿದೆ ಎಂದು ಮುಲ್ಲಾ ನಿಸಾರ್ ಅಹಮ್ಮದ್ ಹೇಳಿದ್ದಾರೆ.
ಆಫ್ಘಾನಿಸ್ತಾನ ಗಡಿಯಲ್ಲಿ ಸುಸೈಡ್ ಬಾಂಬರ್ಸ್ ನಿಯೋಜನೆ ಮಾಡಿದ್ದರೆ, ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬದ್ರಿ 313 ಪಡೆಯನ್ನು ನಿಯೋಜಿಸಿದೆ. ತಾಲಿಬಾನ್ ಉಗ್ರರ ಸಂಘಟನೆಯಲ್ಲಿ 313 ಪಡೆ ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿದ ಪಡೆಯಾಗಿದೆ. ಇವರಿಗೆ ಲಷ್ಕರ್ ಇ ಮನ್ಸೂರಿ ಸುಸೈಡ್ ಬಾಂಬರ್ ಪಡೆ ನೆರವು ನೀಡಲಿದೆ ಎಂದು ಮುಲ್ಲಾ ನಿಸಾರ್ ಅಹಮ್ಮದ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.