ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ದಿ.ಲಾಲ್ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಅಂಗವಾಗಿ ಕುಮಾರಕೃಪ ರಸ್ತೆಯಲ್ಲಿರುವ ಗಾಂಧಿ ಭವನದ ಖಾದಿ ಮಾರಾಟ ಮಳಿಗೆಗೆ ಶನಿವಾರ ಬೆಳಿಗ್ಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಮಾರು 16 ಸಾವಿರ ರು. ಮೌಲ್ಯದ ಸೀರೆ ಹಾಗೂ ಇತರ ಉಡುಗೆ ಖರೀದಿಸಿದರು. ಅನಂತರ ಸೀರೆ ಸೆಲೆಕ್ಷನ್ ಸರಿ ಹೋಗದಿದ್ದರೆ ತಮ್ಮ ಗೃಹ ಸಚಿವರು ಅರ್ಥಾತ್ ಪತ್ನಿ ಬೈಯದಿದ್ದರೆ ಸಾಕು ಎಂದು ತಮಾಷೆಯಾಗಿ ಹೇಳಿದರು.
ಖಾದಿ ಎಂಪೋರಿಯಂಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಖಾದಿ ಬಟ್ಟೆಯ ಬಗ್ಗೆ ಮಳಿಗೆಯ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಪಟ್ಟೆ ಇರುವ ಬಟ್ಟೆ ಬೇಡ, ಈ ಕಲರ್ ರಾಂಗ್ ಆಗಿದೆ ಎಂದು ಹೇಳುತ್ತಾ ಕೊನೆಗೆ ತಮಗೆ ಜುಬ್ಬಾ ಹೊಲೆಸಿಕೊಳ್ಳಲು ತಲಾ ಮೂರು ಮೀಟರ್ ಅಳತೆಯ ಹಲವು ಜುಬ್ಬಾ ಪೀಸ್ ಖರೀದಿಸಿದರು. ನಂತರ ಪತ್ನಿ ಚನ್ನಮ್ಮ ಅವರಿಗಾಗಿ ಸೀರೆ ಖರೀದಿಸಲು ಮುಂದಾದ ಬೊಮ್ಮಾಯಿ ಅವರು ಮೂರ್ನಾಲ್ಕು ಸೀರೆಗಳನ್ನು ಪರಿಶೀಲಿಸಿ ಕೊನೆಗೆ ಹಸಿರು ಬಣ್ಣದ ಸೀರೆ ಆಯ್ಕೆ ಮಾಡಿದರು. ಆಗ ತಮ್ಮ ಜೊತೆಗಿದ್ದ ಸಚಿವ ಗೋವಿಂದ ಕಾರಜೋಳ ಅವರನ್ನು ಉದ್ದೇಶಿಸಿ, ‘ಕಾರಜೋಳ ಸಾಹೇಬ್ರೇ ನೀವೂ ಸೀರೆ ಖರೀದಿಸಿ’ ಎಂದು ಹೇಳಿದರು.
‘ಸೀರೆ ಖರೀದಿ ಬಗ್ಗೆ ನನಗೆ ಗೊತ್ತಾಗುವುದಿಲ್ಲ’ ಎಂದು ಕಾರಜೋಳ ಅವರು ಪ್ರತಿಕ್ರಿಯಿಸಿದರು. ಆಗ ಬೊಮ್ಮಾಯಿ ಅವರು, ‘ದುಡ್ಡು ಕೊಟ್ಟು ಬೈಸಿಕೊಳ್ಳುವ ಕೆಲಸ ಇದು. ನಾವೇನೋ ಖುಷಿಯಿಂದ ಮನೆಯವರಿಗೆ ಎಂದು ಸೀರೆ ಖರೀದಿ ಮಾಡಿದ್ದೇವೆ. ಆದರೆ ಸೀರೆ ಸೆಲೆಕ್ಷನ್ ಸರಿಯಲ್ಲ ಎಂದು ಪತ್ನಿ ಬೈಯದಿದ್ದರೆ ಸಾಕು’ ಎಂದು ಹಾಸ್ಯವಾಗಿ ಹೇಳಿ ಅಲ್ಲಿದ್ದವರು ನಗುವಂತೆ ಮಾಡಿದರು. ಒಟ್ಟು 16,031 ರುಪಾಯಿ ಮೊತ್ತದ ಬಟ್ಟೆಯನ್ನು ಮುಖ್ಯಮಂತ್ರಿಗಳು ಖರೀದಿಸಿದರು.