ಮೆಲ್ಬೋರ್ನ್: ವಿಶ್ವಪರ್ಯಾಯ ಸಂಚಾರದಲ್ಲಿರುವ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಪಾದರು ಹತ್ತು ದಿನಗಳ ಸಿಡ್ನಿ ನಗರ ಸಂಚಾರವನ್ನು ಯಶಸ್ವಿಯಾಗಿ ಮುಗಿಸಿ ಮೆಲ್ಬೋರ್ನ್ ಮಹಾನಗರಕ್ಕೆ ಇಂದು ಬಂದಿಳಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು, ಭಕ್ತಿಭಾವದಿಂದ ಶ್ರೀಗಳನ್ನು ಸ್ವಾಗತಿಸಿದರು. ಆಸ್ಟ್ರೇಲಿಯಾದ ಸಾಂಪ್ರದಾಯಿಕ ವೇಷಧಾರಿಗಳಿಂದಲೂ ಶ್ರೀಗಳಿಗೆ ಭರ್ಜರಿ ಸ್ವಾಗತ ಕೋರಲಾಯಿತು.
ಈ ಸಂದರ್ಭದಲ್ಲಿ ಶ್ರೀಗಳು 2015 ರಲ್ಲಿ ಸ್ಥಾಪಿಸಿದ್ದ ಶ್ರೀ ವೆಂಕಟಕೃಷ್ಣ ವೃಂದಾವನದಲ್ಲಿ ಮಕರ ಸಂಕ್ರಮಣದ ಪುಣ್ಯ ದಿನದಂದು ಉಡುಪಿಯ ಶ್ರೀಕೃಷ್ಣನ ಸುಂದರ ವಿಗ್ರಹವನ್ನು ಪ್ರತಿಷ್ಠಾಪಿಸಲಿದ್ದಾರೆ. ಜಗದ್ಗುರು ಶ್ರೀಮನ್ಮಧ್ವಾಚಾರ್ಯರು 750 ವರ್ಷಗಳ ಹಿಂದೆ ಇದೇ ಪುಣ್ಯ ದಿನದಂದು ಉಡುಪಿಯಲ್ಲಿ ಶ್ರೀ ಕೃಷ್ಣನನ್ನು ಪ್ರತಿಷ್ಠಾಪಿಸಿದ್ದರು.