ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ಯಂತ್ರಾಂಗವನ್ನು ಭ್ರಷ್ಟಾಚಾರದ ಕೂಪ ಎಂದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಲಂಚ ಕೊಡದೆ ಇಲ್ಲಿ ಯಾವ ಕೆಲಸವೂ ಆಗುವುದಿಲ್ಲ ಎಂದು ಆರೋಪಿಸಿದ್ದಾರೆ.
ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಂಗಾಳದಲ್ಲಿ ಲಂಚ ಕೊಡದೆ ಯಾವ ಕೆಲಸವನ್ನೂ ಮಾಡಿಕೊಡಲಾಗುವುದಿಲ್ಲ. ಟಿಎಂಸಿ ರೈತರನ್ನೂ ಸಹ ಬಿಡಲಿಲ್ಲ. ಯುವಕರ ಭವಿಷ್ಯದೊಂದಿಗೆ ಆಟವಾಡುತ್ತಿದೆ ಎಂದು ಆರೋಪಗಳ ಸುರಿಮಳೆಗೈದು, ೨೬೦೦೦ ಕುಟುಂಬಗಳು ಉದ್ಯೋಗವಿಲ್ಲದೆ ಉಳಿದಿವೆ ಎಂದರು.
ಮಾಲ್ಡಾದ ರೈತರು ಬೆಳೆಯುವ ಮಾವು ಮತ್ತು ಮಖಾನಾ ವಿಶ್ವವಿಖ್ಯಾತ. ಇವರ ಆದಾಯ ಹೆಚ್ಚಿಸಲು ಆಹಾರ ಸಂಸ್ಕರಣಾ ಉದ್ಯಮ ಸ್ಥಾಪಿಸುತ್ತೇವೆ ಎಂದ ಪ್ರಧಾನಿ, ಟಿಎಂಸಿ ಅದರಲ್ಲಿಯೂ ಪಾಲು ಕೇಳುತ್ತದೆ ಎಂದು ಟೀಕಿಸಿದರು.
ಟಿಎಂಸಿ ಮತ್ತು ಕಾಂಗ್ರೆಸ್ ನಡುವಿನ ಸಂಘರ್ಷದ ಬಗ್ಗೆ ಮಾತನಾಡಿದ ಪ್ರಧಾನಿ, ಸತ್ಯ ಬೆರೆಯೇ ಇದೆ ಎಂದಿದ್ದಾರೆ. ʼಎರಡೂ ಪಕ್ಷಗಳ ಸಿದ್ಧಾಂತ ಒಂದೇ. ದೇಶದ ಸುರಕ್ಷತೆಯ ದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರಗಳನ್ನು ಅವರು ಹಿಂಪಡೆಯಬಯಸುತ್ತಾರೆ. ಹೀಗಾಗಿ ಅವುಗಳನ್ನು ತಿರಸ್ಕರಿಸಬೇಕುʼ ಎಂದು ಕರೆ ನೀಡಿದ್ದಾರೆ.