‘ಮೇರಾ ಬೂತ್ ಸಬ್ ಸೇ ಮಜ್ಬೂತ್’ ಅಭಿಯಾನ ಅಂಗವಾಗಿ ಮಧ್ಯಪ್ರದೇಶದ ಭೋಪಾಲ್ದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ, ಮುಸ್ಲಿಂ ತುಷ್ಟೀಕರಣ ರಾಜಕೀಯ, ವಿಪಕ್ಷಗಳ ಮಹಾಮೈತ್ರಿ ಮತ್ತು ವಂಶಾವಳಿ ರಾಜಕೀಯದ ವಿರುದ್ಧ ಹರಿಹಾಯ್ದರು. ‘ಒಂದು ಮನೆಯಲ್ಲಿ ಒಬ್ಬ ಸದಸ್ಯನಿಗೆ ಒಂದು ಕಾನೂನು, ಇನ್ನೊಬ್ಬ ಸದಸ್ಯನಿಗೆ ಇನ್ನೊಂದು ಕಾನೂನು ಇರಲು ಸಾಧ್ಯವೇ? ಇದರಿಂದ ಮನೆಯು ಕಾರ್ಯನಿರ್ವಹಿಸಲಾಗುತ್ತದೆಯೇ? ಇಂತಹ ದ್ವಂದ್ವ ವ್ಯವಸ್ಥೆಯಿಂದ ದೇಶ ಹೇಗೆ ಕಾರ್ಯ ನಿರ್ವಹಿಸಲು ಸಾಧ್ಯ? ಎಂದು ಪ್ರಶ್ನಿಸಿದರು.
ಈ ಮೂಲಕ ಒಂದು ದೇಶ ಒಂದು ಕಾನೂನು ಎಂಬ ಏಕರೂಪ ನಾಗರೀಕ ಸಂಹಿತೆ ಜಾರಿ ಮಾಡುವುದರ ಬಗ್ಗೆ ಮೋದಿ ಸುಳಿವು ನೀಡಿದ್ದಾರ ಎಂಬುದು ಸದ್ಯದ ಚರ್ಚೆ. ಹಾಗಾದರೆ ಏಕರೂಪ ನಾಗರಿಕ ಸಂಹಿತೆ ಎಂದರೆ ಏನು ಎಂಬುದರ ಬಗ್ಗೆ ತಿಳಿದುಕೊಳ್ಳುವುದಾದರೇ, ಏಕರೂಪ ನಾಗರಿಕ ಸಂಹಿತೆ ಎಂದರೆ ಇಡೀ ದೇಶದಲ್ಲಿ ಪ್ರತಿಯೊಂದು ಧರ್ಮ, ಜಾತಿ, ಪಂಗಡ, ವರ್ಗಕ್ಕೆ ಒಂದೇ ನಿಯಮವಿರುವುದು. ಆದರೆ ಈಗ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯಗಳು ವಿಭಿನ್ನ ಧಾರ್ಮಿಕ ಕಾನೂನುಗಳನ್ನು ಹೊಂದಿವೆ. ಹಿಂದೂ ಕಾನೂನು ಬುದ್ಧ, ಜೈನ ಮತ್ತು ಸಿಖ್ ಧರ್ಮಗಳ ಅನುಯಾಯಿಗಳಿಗೂ ಅನ್ವಯಿಸುತ್ತದೆ. ವಿಲ್ ಮತ್ತು ಮದುವೆಯಂತಹ ವಿಷಯಗಳಲ್ಲಿ ಈ ಕಾನೂನುಗಳನ್ನು ಪಾಲಿಸಬೇಕು.
ಭಾರತದ ಇಡೀ ಭೂಪ್ರದೇಶದಾದ್ಯಂತ ಜನರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಪ್ರಯತ್ನಗಳು ನಡೆಯುತ್ತಿದೆ. ಸಂವಿಧಾನದ ಆರ್ಟಿಕಲ್ 44ರ ಆಶಯ ಕೂಡಾ ಅದೇ ಆಗಿದೆ. ದೇಶದ ಎಲ್ಲ ನಾಗರಿಕರಿಗೂ ಒಂದೇ ಕಾನೂನು ಇರಬೇಕು ಅಂತಾ ನಮ್ಮ ಸಂವಿಧಾನ ಪ್ರತಿಪಾದಿಸುತ್ತದೆ. ಆದರೆ ಧಾರ್ಮಿಕ ಸಂಘಟನೆಗಳು ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸುತ್ತವೆ. ಈ ಕಾನೂನನ್ನು ಜಾರಿಗೆ ತಂದರೆ ತಮ್ಮ ವೈಯಕ್ತಿಕ ಕಾನೂನುಗಳು ಅಪಾಯಕ್ಕೆ ಸಿಲುಕುತ್ತವೆ ಎಂಬುದು ಧಾರ್ಮಿಕ ಸಂಘಟನೆಗಳ ಅಭಿಪ್ರಾಯ. ಹೀಗಾಗಿ ಇಸ್ಲಾಮಿಕ್ ಸಂಘಟನೆಗಳು ಈ ಕಾನೂನನ್ನು ಹೆಚ್ಚು ವಿರೋಧಿಸುತ್ತವೆ.
ಏಕರೂಪ ನಾಗರಿಕ ಸಂಹಿತೆಯು ಜಾತ್ಯತೀತ ಕಾನೂನಾಗಿದ್ದು, ಅದರ ಅನುಷ್ಠಾನದ ನಂತರ ಎಲ್ಲಾ ಧರ್ಮಗಳ ವೈಯಕ್ತಿಕ ಕಾನೂನುಗಳು ಕೊನೆಗೊಳ್ಳುತ್ತವೆ. ಇದೀಗ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯಗಳು ವಿಭಿನ್ನ ಧಾರ್ಮಿಕ ಕಾನೂನುಗಳನ್ನು ಹೊಂದಿವೆ. ಹಿಂದೂ ಕಾನೂನು ಬುದ್ಧ, ಜೈನ ಮತ್ತು ಸಿಖ್ ಧರ್ಮಗಳ ಅನುಯಾಯಿಗಳಿಗೂ ಅನ್ವಯಿಸುತ್ತದೆ. ವಿಲ್ ಮತ್ತು ಮದುವೆಯಂತಹ ವಿಷಯಗಳಲ್ಲಿ ಈ ಕಾನೂನುಗಳನ್ನು ಪಾಲಿಸಬೇಕು. ವಿಚ್ಛೇದನ ಮತ್ತು ನಂತರದ ನಿರ್ವಹಣೆಗೆ ಸಂಬಂಧಿಸಿದ ನಿಯಮಗಳನ್ನು ವೈಯಕ್ತಿಕ ಕಾನೂನಿನ ಮೂಲಕ ನಿರ್ಧರಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ಈ ಎಲ್ಲ ವೈಯಕ್ತಿಕ ಕಾನೂನುಗಳು ಕೊನೆಗೊಳ್ಳಲಿವೆ ಹಾಗೂ ನಾಗರಿಕರು ಏಕರೂಪ ನಾಗರಿಕ ಸಂಹಿತೆ ಪಾಲಿಸಬೇಕಾಗುತ್ತದೆ.
ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದು ಸುಲಭವಲ್ಲ. ಇದರ ಹಿಂದಿನ ಕಾರಣ ರಾಜಕೀಯದಾಟ. ಧಾರ್ಮಿಕ ಸಂಘಟನೆಗಳೂ ಇದರ ವಿರುದ್ಧ ನಿಂತಿವೆ. ಹಿಂದೂ ಸಂಘಟನೆಗಳು ತಮ್ಮ ವೈಯಕ್ತಿಕ ಕಾನೂನನ್ನು ಬಿಟ್ಟುಕೊಟ್ಟಿವೆ. ಆದರೆ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಚರ್ಚೆಯಾದಾಗಲೆಲ್ಲಾ ಇಸ್ಲಾಮಿಕ್ ಸಂಘಟನೆಗಳು ಅದರ ವಿರುದ್ಧ ನಿಲ್ಲುತ್ತವೆ. ಇವೆಲ್ಲಾ ಪರ – ವಿರೋಧ ವಾದಗಳ ನಡುವಲ್ಲೇ ಕೇಂದ್ರ ಸರ್ಕಾರವು ಏಕರೂಪ ನಾಗರಿಕ ಸಂಹಿತೆಯ ಜಾರಿಗೆ ಒಲವು ತೋರಿದೆ. ಇದರಿಂದ ಸಾಮಾಜಿಕ ಶಾಂತಿ ಸ್ಥಾಪನೆ, ಅಂತರ್ ಧರ್ಮೀಯ ಬಾಂಧವ್ಯ ಹೆಚ್ಚಳ ಹಾಗೂ ಕಾನೂನಾತ್ಮಕ ಏಕತೆ ಸಾಧ್ಯ ಎಂದು ವಾದಿಸಿದೆ.