ಕೇದಾರನಾಥ: ಚಾರ್ಧಾಮ್ ಯಾತ್ರೆಯ ಅಂಗವಾಗಿ ಕೇದಾರನಾಥದಲ್ಲಿ ಕಸ ಶೇಖರಣೆಯಾಗುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಪವಿತ್ರ ಯಾತ್ರಾಸ್ಥಳದಲ್ಲಿ ಹೀಗೆ ಕಸ ಹಾಕುವುದು ಅನುಚಿತ ಎಂದರು.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ ‘ಮನ್ ಕಿ ಬಾತ್’ ಅಂಗವಾಗಿ ರೇಡಿಯೊದಲ್ಲಿ ಮಾತನಾಡಿ, ಉತ್ತರಾಖಂಡದ ಕೇದಾರನಾಥ ಪ್ರವಾಸದುದ್ದಕ್ಕೂ ತ್ಯಾಜ್ಯ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದರು. “ಪ್ರಸ್ತುತ ದೇಶದಲ್ಲಿ ಪವಿತ್ರ ಚಾರ್ಧಾಮ್ ಯಾತ್ರೆ ನಡೆಯುತ್ತಿದೆ. ಈ ಯಾತ್ರೆಯ ಭಾಗವಾಗಿ ಪ್ರತಿದಿನ ಸಾವಿರಾರು ಭಕ್ತರು ಕೇದಾರನಾಥಕ್ಕೆ ಭೇಟಿ ನೀಡಿ ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ.
ಆದರೆ, ಅನೇಕ ಪ್ರಯಾಣಿಕರು ದಾರಿಯುದ್ದಕ್ಕೂ ತ್ಯಾಜ್ಯ ಮತ್ತು ಕಸವನ್ನು ಎಲ್ಲೆಂದರಲ್ಲಿ ಹಾಕಿ ಗಲೀಜು ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ಈ ವಿಚಾರವಾಗಿ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದು, ಅಭಾಸ ವ್ಯಕ್ತವಾಗುತ್ತಿದೆ.
ಆಧ್ಯಾತ್ಮಿಕ ಸ್ಥಳಗಳಲ್ಲಿ ಇಂತಹ ಅಧ್ವಾನಗಳನ್ನು ನೋಡುವುದು ಸರಿಯಲ್ಲ. ಕೆಲವು ಭಕ್ತರು ಈ ಕಸದ ಜಾಗಗಳನ್ನು ಸ್ವಚ್ಛಗೊಳಿಸುತ್ತಿದ್ದರೆ, ಇನ್ನೂ ಕೆಲ ಭಕ್ತರು ತಾವು ಇರುವ ಸ್ಥಳ ಸ್ವಚ್ಛವಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ತಿಳಿಸಿದರು.