ಬದೌನ್: ಆಘಾತಕಾರಿ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದ ರೋಗಿಯನ್ನು ಇಲಿಗಳು ಕಚ್ಚಿವೆ ಎಂದು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ಭರವಸೆ ನೀಡಿದೆ.
ದಾತಗಂಜ್ ತಹಸಿಲ್ ಪ್ರದೇಶದ ಬುದ್ ಬಜಾರ್ ಪಟ್ಟಣದ ನಿವಾಸಿ ರಾಮ್ ಸೇವಕ್ ಗುಪ್ತಾ ಅವರು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜಿನ, ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಭಾನುವಾರ ರಾತ್ರಿ, ಗುಪ್ತಾ ಪತ್ನಿ ಐಸಿಯುಗೆ ಹೋದಾಗ, ಇಲಿಯು ರೋಗಿಯ ಪಾದಗಳನ್ನು ಕಚ್ಚುತ್ತಿದ್ದು, ಅದರಿಂದ ರಕ್ತ ಹೊರಬರುತ್ತಿರುವುದನ್ನು ಗಮನಿಸಿದ್ದಾರೆ.
ಅಲ್ಲದೇ ಅವರ ಹಣೆ, ಕಿವಿ ಮತ್ತು ಕಾಲ್ಬೆರಳುಗಳ ಮೇಲೆ ಇಲಿ ಕಚ್ಚಿದ ಗುರುತುಗಳಿದ್ದವು. ವಾರ್ಡ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ರೋಗಿಯ ಕುಟುಂಬ ಸದಸ್ಯರು ಆರೋಪ ಮಾಡಿದ್ದಾರೆ. ಬಳಿಕ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಸಿ.ಪ್ರಜಾಪತಿ ಅವರು ಪರಿಶೀಲನೆ ನಡೆಸಿದ್ದು, ಆಕ್ಸಿಜನ್ ಪೈಪ್ ಅಳವಡಿಸಿದ್ದ ಪ್ರದೇಶದಲ್ಲಿ ಇರುವ ರಂಧ್ರದಿಂದ ಇಲಿಗಳು ಬರುತ್ತಿವೆ ಎಂದು ತಿಳಿಸಿದ್ದಾರೆ.
ರೋಗಿಯ ಪರಿಚಾರಕರು ಇದೇ ಪ್ರದೇಶದಲ್ಲಿ ಕುಳಿತು ಆಹಾರ ಸೇವಿಸುತ್ತಿರುವುದರಿಂದ ಇಲಿಗಳ ಸಂಖ್ಯೆ ಹೆಚ್ಚಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ಇಲಿ ಬಲೆಗಳನ್ನು ಕೂಡ ಅಳವಡಿಸಲಾಗುತ್ತಿದ್ದು, ವಿಚಾರಣೆ ಬಳಿಕ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ರೋಗಿಯು ಚೇತರಿಸಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.