ಮೈಸೂರು: ಮೈಸೂರು ಅರಸರ ಕಾಲದಲ್ಲಿ ತಯಾರಾಗಿದ್ದ ಮೈಸೂರು ಪಾಕ್ ಇದೀಗ ಜಾಗತಿಕ ಮನ್ನಣೆ ಪಡೆದಿರುವ ಹಿನ್ನಲೆಯಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಚಾಮುಂಡಿ ಬೆಟ್ಟದಲ್ಲಿ ಪ್ರವಾಸಿಗರಿಗೂ ಹಾಗೂ ಭಕ್ತರಿಗೆ ಮೈಸೂರು ಪಾಕ್ ವಿತರಿಸಿ ಮೈಸೂರು ಪಾಕ್ ಮಹತ್ವ ಹಾಗೂ ಅದರ ಇತಿಹಾಸ ತಿಳಿಸಲಾಯಿತು.
ಈ ವೇಳೆ ಮಾತನಾಡಿದ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್ ಮೈಸೂರು ಪಾಕ್ ಗೆ ಜಾಗತಿಕ ಮನ್ನಣೆ ಬಂದಿರುವುದು ಮೈಸೂರಿಗೆ ಹೆಮ್ಮೆಯ ವಿಷಯವಾಗಿದೆ. ಮೈಸೂರು ಪಾಕ್ ಸೇವನೆಯಿಂದ ಶಕ್ತಿ ಹಾಗೂ ಆರೋಗ್ಯ ಸಾಧ್ಯವಾಗಿದ್ದು, ಮೈಸೂರಿಗೆ ಬಂದವರೆಲ್ಲರೂ ಮೈಸೂರು ಪಾಕ್ ಸವಿದು ಊರಿಗೆ ತೆಗೆದುಕೊಂಡು ಹೋಗುತ್ತಾರೆ, ಚಿಕ್ಕ ಮಕ್ಕಳಿಂದ ಹಿರಿಯ ನಾಗರಿಕರವರೆಗೂ ಮೈಸೂರು ಪಾಕ್ ತಿನ್ನಲು ಅಚ್ಚುಮೆಚ್ಚು, ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆ ಇರುವ ಮೈಸೂರು ಪಾಕ್ ಇಂದು ವಿಶ್ವಾದ್ಯಂತ ತನ್ನ ಹಿರಿಮೆ ಸಾರುತ್ತಿದೆ, ಹಾಗೆಯೇ ಪ್ರವಾಸೋದ್ಯಮ ಇಲಾಖೆ ಮೈಸೂರು ಪಾಕ್ ತಯಾರಿಸುವ ಅಡುಗೆ ಉದ್ಯಮವನ್ನು ಸೃಷ್ಟಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ನಗರಪಾಲಿಕೆ ಮಾಜಿ ಸದಸ್ಯರಾದ ಎಂ.ಡಿ.ಪಾರ್ಥಸಾರಥಿ ಮಾತನಾಡಿ ಕರ್ನಾಟಕದ ಜನಪ್ರಿಯ ಸಿಹಿ ತಿನಿಸಾಗಿರುವ ಮೈಸೂರ್ ಪಾಕ್ ನ ರುಚಿಯನ್ನು ಸವಿಯದವರು ವಿರಳ ಎನ್ನಬೇಕು. ವಿಶ್ವದ ಸಿಹಿತಿನಿಸುಗಳ ಪಟ್ಟಿಯಲ್ಲಿ ನಮ್ಮ ಮೈಸೂರ್ಪಾಕ್ಗೆ 14ನೇ ಸ್ಥಾನ ದಕ್ಕಿರುವುದು ಕರ್ನಾಟಕ ಪಾಲಿಗೆ ಹೆಮ್ಮೆಯ ವಿಷ ಯ. ಮೈಸೂರು ಪಾಕ್ಗೆ 90 ವರ್ಷಗಳ ಇತಿಹಾಸವಿದೆ. ಈ ಖಾದ್ಯವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಮೈಸೂರು ಅರಮನೆಯ ಬಾಣಸಿಗ ಮಾದಪ್ಪ ಅವರಿಗೆ ಸಲ್ಲಬೇಕು. ಆಗಿನ ಮೈಸೂರಿನ ಮಹಾರಾಜ ಕೃಷ್ಣರಾಜ ಒಡೆಯರ್ರವರ ಅಂದಿನ ಊಟಕ್ಕೆ ಸಿಹಿಯಿಲ್ಲದಿದ್ದುದನ್ನು ಗಮನಿಸಿ ಕಡಲೇಹಿಟ್ಟು, ತುಪ್ಪ, ಸಕ್ಕರೆಗಳ ಹದವಾದ ಮಿಶ್ರಣವನ್ನು ಬಳಸಿ ತಯಾರಿಸಿದ ಸಿಹಿತಿಂಡಿಯೇ ಮೈಸೂರ್ಪಾಕ್ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರ ದೀಕ್ಷಿತ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್, ಸಾಮಾಜಿಕ ಚಿಂತಕರಾದ ದೂರ ರಾಜಣ್ಣ, ಆನಂದ್ ದಯಾನಂದ, ಆದರ್ಶ್, ಅಮರ್ ಬಾಬು ಇನ್ನಿತರರು ಇದ್ದರು.