ಅಯೋಧ್ಯೆ: ಇಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಸಂಪನ್ನಗೊಂಡಿತು. ಆ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ʼಇನ್ನು ಮುಂದೆ ಈ ಮಂದಿರವನ್ನು ನೋಡುವ ಮಂದಿ ಈ ಕಾಲಘಟ್ಟದವರನ್ನು ಸ್ಮರಿಸಲಿದ್ದಾರೆʼ ಎನ್ನುವುದರ ಮೂಲಕ ಇದೊಂದು ಐತಿಹಾಸಿಕ ಕ್ಷಣ ಎಂದಿದ್ದಾರೆ.
ಮುಂದಿನ ವರ್ಷಗಳಲ್ಲಿ ಭಾರತ ಹೇಗಿರಬೇಕು ಎಂಬುದರ ಬಗ್ಗೆ ಮಾತಾಡುತ್ತಾ, ʼಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮ, ಭಾರತದ ದೃಷ್ಟಿ, ದರ್ಶನ, ದಿಗ್ದರ್ಶನದ ಮಂದಿರʼ ಎಂದು ರಾಮಮಂದಿರದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ʼಭಾರತದ ಪವಿತ್ರತೆಯನ್ನು ಅರಿಯದ ಕೆಲವರು ರಾಮಮಂದಿರ ನಿರ್ಮಾಣದಿಂದ ಬೆಂಕಿ ಬೀಳಲಿದೆ ಎನ್ನುತ್ತಿದ್ದಾರೆ. ಧೈರ್ಯ, ಸದ್ಭಾವ ಮತ್ತು ಸಮನ್ವತೆಯ ಪ್ರತೀಕವಾದ ಭಾರತದಲ್ಲಿ ಹೀಗಾಗಲು ಸಾಧ್ಯವೇ ಇಲ್ಲ. ಸಮಾಜದ ಪ್ರತಿಯೊಬ್ಬರ ಭವಿಷ್ಯವನ್ನು ಉಜ್ವಲಗೊಳಿಸಲಿರುವ ರಾಮ ವರ್ತಮಾನವಲ್ಲ, ಅನಂತಕಾಲʼ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ತ್ಯಾಗ ಬಲಿದಾನ ನೀಡಿದವರನ್ನು ನೆನೆದ ಪ್ರಧಾನಿ, ಇದು ಕೇವಲ ವಿಜಯದ ದಿನವಲ್ಲ, ವಿನಯದ ದಿನವೂ ಹೌದು ಎಂದರು.
ಭಾರತದ ಕೆಲ ಸಾಧನೆಗಳನ್ನು ಪಟ್ಟಿ ಮಾಡಿದ ಮೋದಿ, ಯುವಜನತೆಯ ಶಕ್ತಿಯಿಂದ ಭಾರತ ಇಂದು ಸಂಪದ್ಭರಿತವಾಗಿದೆ. ಚಂದ್ರನ ಅಂಗಳದಲ್ಲಿ ರಾರಾಜಿಸುತ್ತಿರುವ ತಿರಂಗಾ, ೧೫ಲಕ್ಷ ಕೀ.ಮೀ ದೂರದಲ್ಲಿ ಸೂರ್ಯನ ಅಧ್ಯಯನ ನಡೆಸುತ್ತಿರುವ ಆದಿತ್ಯ ಎಲ್೧ಗಳಂತ ಸಾಧನೆಗಳ ಮೂಲಕ ಬರಲಿರುವ ಸಮಯ ಸಫಲತೆಯಿಂದ ಕೂಡಿದ್ದಾಗಿರಲಿದ್ದು, ಭವ್ಯ ರಾಮಮಂದಿರ ಇದಕ್ಕೆ ಸಾಕ್ಷಿ ಎಂದರು.