ತೆಲಂಗಾಣದ ಸಿಎಂ ಹುದ್ದೆ ರೇಸ್ ನಲ್ಲಿರುವ ರೇವಂತ್ ರೆಡ್ಡಿ ಯಾರು ಎಂಬ ಕುರಿತ ಕಿರು ವಿವರ ಇಲ್ಲಿದೆ. ರೇವಂತ್ ರೆಡ್ಡಿ ಮೂಲತಃ ಕಾಂಗ್ರೆಸಿಗರೇನಲ್ಲ. ಕಾಲೇಜು ದಿನಗಳಲ್ಲಿ ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿಯೊಂದಿಗೆ ಗುರುತಿಸಿಕೊಂಡಿದ್ದ ರೆಡ್ಡಿ ಮೊದಲಿಗೆ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. . 2007ರಲ್ಲಿ ಅವರು ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2009ರಲ್ಲಿಅವಿಭಜಿತ ಆಂಧ್ರ ಪ್ರದೇಶದ ಕೋಡಂಗಲ್ ಕ್ಷೇತ್ರದಿಂದ ಟಿಡಿಪಿ ಟಿಕೆಟ್ನಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದರು.
ಮುಂದೆ 2014ರಲ್ಲಿ ರಾಜ್ಯ ಇಬ್ಭಾಗವಾದಾಗ ಅವರ ಕ್ಷೇತ್ರ ತೆಲಂಗಾಣ ಪಾಲಾಯಿತು. ರೆಡ್ಡಿ ತೆಲಂಗಾಣ ಟಿಡಿಪಿಯ ಪ್ರಮುಖ ನಾಯಕರಾದರು. 2014ರಲ್ಲಿ ರೇವಂತ್ ರೆಡ್ಡಿ ಗೆಲುವು ಸಾಧಿಸಿದ್ದಲ್ಲದೆ, ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ 15 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಪ್ರಮುಖ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಮುಂದೆ ಸಾಲು ಸಾಲು ಸವಾಲುಗಳು ರೇವಂತ್ ರೆಡ್ಡಿಗೆ ಎದುರಾದವು.
2015ರಲ್ಲಿ ನಾಮನಿರ್ದೇಶಿತ ಆಂಗ್ಲೋ-ಇಂಡಿಯನ್ ಶಾಸಕ ಎಲ್ವಿಸ್ ಸ್ಟೀಫನ್ಸನ್ಗೆ ಲಂಚ ನೀಡುವ ವೇಳೆ ಸಿಕ್ಕಿಬಿದ್ದು ಎಸಿಬಿ ರೇವಂತ್ ರೆಡ್ಡಿಯನ್ನು ಬಂಧಿಸಿತ್ತು. 30 ದಿನಗಳ ಕಾಲ ರೆಡ್ಡಿ ಜೈಲಿನಲ್ಲಿ ಇರಬೇಕಾಯಿತು. ಮುಂದೆ ಶಾಸಕರು ಸರಣಿಯಾಗಿ ಟಿಆರ್ಎಸ್ಗೆ ವಲಸೆ ಹೋಗಲಾರಂಭಿಸಿದರು. ಅತ್ತ ಚಂದ್ರಬಾಬು ನಾಯ್ಡು ಕೂಡ ಆಂಧ್ರಕ್ಕೆ ಹೆಚ್ಚಿನ ಒತ್ತು ನೀಡಲಾರಂಭಿಸಿ, ತೆಲಂಗಾಣದತ್ತ ನಿರ್ಲಕ್ಷ ತಾಳಿದರು. ಈ ವೇಳೆ ರೇವಂತ್ ರೆಡ್ಡಿಗೆ ತನ್ನ ಅಸ್ತಿತ್ವದ ಪ್ರಶ್ನೆ ಕಾಡಲಾರಂಭಿಸಿತು. ಆಗ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾದರು. ನಂತರ ಎಲ್ಲರ ವಿರೋಧದ ನಡುವೆ 2018ರ ಸೆಪ್ಟೆಂಬರ್ 20ರಂದು ತೆಲಂಗಾಣ ಕಾಂಗ್ರೆಸ್ನ ಕಾರ್ಯಾಧ್ಯಕ್ಷರನ್ನಾಗಿ ಪಕ್ಷ ರೇವಂತ್ ರೆಡ್ಡಿಯನ್ನು ನೇಮಕ ಮಾಡಿತು. 2019ರ ಚುನಾವಣೆಯಲ್ಲಿ ಮಲ್ಕಜ್ಗಿರಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿತು. ಇಲ್ಲಿ ಅಲ್ಪ ಅಂತರದಿಂದ ರೆಡ್ಡಿ ಗೆಲುವು ಸಾಧಿಸಿದರು. ನಂತರ 2021ರ ಜೂನ್ನಲ್ಲಿ ರಾಜ್ಯಾಧ್ಯಕ್ಷ ಹುದ್ದೆ ವಹಿಸಿಕೊಂಡರು. ಅದೇ ಹೊತ್ತಿಗೆ ರಾಜ್ಯದಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಹಾದು ಹೋಯಿತು. ಯಾತ್ರೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಕಾಣಿಸಿಕೊಂಡಿದ್ದು ರೆಡ್ಡಿಯ ವಿಶ್ವಾಸ ಹೆಚ್ಚಿಸಿತು.
ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿತ್ತು. ರೇವಂತ್ ರೆಡ್ಡಿಯ ಆತ್ಮೀಯ ಡಿಕೆ ಶಿವಕುಮಾರ್ ರಾಜ್ಯದ ಉಪಮುಖ್ಯಮಂತ್ರಿ ಹುದ್ದೆಗೇರಿದ್ದರು. ಇದು ರೆಡ್ಡಿಗೆ ಮತ್ತಷ್ಟು ಬೂಸ್ಟ್ ನೀಡಿತು. ರೇವಂತ್ ರೆಡ್ಡಿ ಹಿಂದಿರುಗಿ ನೋಡಲಿಲ್ಲ. ಕರ್ನಾಟಕದಲ್ಲಿ ಯಶಸ್ವಿಯಾಗಿ ಚುನಾವಣಾ ತಂತ್ರಗಾರಿಕೆ ನಿರ್ವಹಿಸಿದ್ದ ಸುನೀಲ್ ಕನುಗೋಳ್ ತಂಡವನ್ನು ತೆಲಂಗಾಣಕ್ಕೂ ಕರೆಸಿಕೊಂಡರು. ಕರ್ನಾಟಕದಿಂದ ಸಿಎಂ, ಡಿಸಿಎಂ ಆದಿಯಾಗಿ ಸಚಿವರೇ ದಂಡೇ ತೆಲಂಗಾಣದಲ್ಲಿ ಬಂದು ಇಳಿಯಿತು. ಇದೀಗ ತೆಲಂಗಾಣದಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದ್ದು, ರೆಡ್ಡಿ ಸಿಎಂ ಗದ್ದುಗೆಯ ಹಾದಿಯಲ್ಲಿದ್ದಾರೆ.