ರಾಜಸ್ಥಾನ: ರಾಜಸ್ಥಾನದ ಕ್ಷೇತ್ರವೊಂದರಲ್ಲಿ ತಮ್ಮ ಅಭ್ಯರ್ಥಿಗೆ ಮತ ಹಾಕದಂತೆ ಕಾಂಗ್ರೆಸ್ ಮತದಾರರಲ್ಲಿ ಕೇಳಿಕೊಳ್ಳುತ್ತಿದೆ. ಭಾರತ್ ಆದಿವಾಸಿ ಪಾರ್ಟಿಯ ಅಭ್ಯರ್ಥಿಗೆ ಬೆಂಬಲ ಸೂಚಿಸಿದ ಕಾಂಗ್ರೆಸ್ ತನ್ನ ಅಭ್ಯರ್ಥಿಗೆ ನಾಮಪತ್ರವನ್ನು ಹಿಂಪಡೆಯುವಂತೆ ಹೇಳಿತ್ತು. ಆತ ಇದಕ್ಕೆ ವಿರುದ್ಧವಾಗಿ ವರ್ತಿಸಿದ ಪರಿಣಾಮ ಈ ಅಸಹಜ ಬೆಳವಣಿಗೆಯಾಗಿದೆ.
ಅರವಿಂದ್ ದಾಮೊರ್ ಎನ್ನುವವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದ ಕಾಂಗ್ರೆಸ್, ನಾಮಪತ್ರ ಹಿಂಪಡೆಯುವ ಕೊನೆಯ ದಿನ ಭಾರತ್ ಆದಿವಾಸಿ ಪಾರ್ಟಿಯ ಅಭ್ಯರ್ಥಿ ರಾಜಕುಮಾರ್ ರೋತ್ ಅವರಿಗೆ ಬೆಂಬಲ ಸೂಚಿಸಿತ್ತು. ಇದರ ಅನುಸಾರ ಅರವಿಂದ್ ತಮ್ಮ ನಾಮಪತ್ರವನ್ನು ಹಿಂಪಡೆಯಬೇಕಿತ್ತು.
ನಾಮಪತ್ರ ಹಿಂಪಡೆಯುವಿಕೆಯ ಕೊನೆಯ ದಿನದ ತನಕ ಎಲ್ಲೂ ಕಾಣಿಸಿಕೊಳ್ಳದ ಅರವಿಂದ್ ಮಾಧ್ಯಮಗಳ ಮುಂದೆ ಬಂದು, ಆಗುತ್ತಿದ್ದ ಬೆಳವಣಿಗೆಗಳನ್ನು ನಿರ್ಲಕ್ಷಿಸಿ ತಾನು ಸ್ಪರ್ಧಿಸುವುದಾಗಿ ಘೋಷಿಸಿದರು. ಇದರಿಂದ ಕಾಂಗ್ರೆಸ್ ಮತಗಳು ವಿಭಜನೆಯಾಗುವ ಸಾಧ್ಯತೆಯಿದ್ದು, ಬಿಜೆಪಿಗೆ ಲಾಭವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
BAP ಅಭ್ಯರ್ಥಿಯನ್ನು ಬೆಂಬಲಿಸುವಂತೆ ಸ್ಥಳೀಯ ಕಾಂಗ್ರೆಸ್ ಕೇಳಿಕೊಳ್ಳುತ್ತಿದ್ದರೆ, ಈ ಮೈತ್ರಿಯನ್ನು ಒಪ್ಪದ ನಾಯಕರು ತಮ್ಮ ಬೆಂಬಲಕ್ಕೆ ನಿಂತಿರುವುದಾಗಿ ಅರವಿಂದ್ ಹೇಳಿಕೊಂಡಿದ್ದಾರೆ.