ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜೀವನದ ಮತ್ತೊಂದು ವಸಂತವನ್ನು ಪೂರ್ಣಗೊಳಿಸಿದ್ದು, ಇಂದು (ಸೆಪ್ಟೆಂಬರ್ 17) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರಿಗೆ ಇನ್ನು 73 ವರ್ಷ. ಪ್ರಧಾನಿ ಮೋದಿ ಹುಟ್ಟುಹಬ್ಬದ ನಿಮಿತ್ತ ದೇಶಾದ್ಯಂತ ಅವರ ಅಭಿಮಾನಿಗಳು, ಬಿಜೆಪಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರಧಾನಿ ಮೋದಿ ಹುಟ್ಟುಹಬ್ಬದ ದಿನ ಹಲವು ಕಾರ್ಯಕ್ರಮಗಳು, ಯೋಜನೆಗಳು ಚಾಲ್ತಿಗೆ ಬಂದಿವೆ.
ಈ ಹೊತ್ತಲ್ಲೇ ವಿಶ್ವದ ಪ್ರಭಾವಿ ನಾಯಕರ ಪಟ್ಟಿಯಲ್ಲಿ ಮೋದಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಪ್ರಭಾವಿ ಜಾಗತಿಕ ನಾಯಕರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಮಾರ್ನಿಂಗ್ ಕನ್ಸಲ್ಟ್ ನಡೆಸಿದ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರ ಅನುಮೋದನೆ ರೇಟಿಂಗ್ ಪಟ್ಟಿಯಲ್ಲಿ 76 ಪ್ರತಿಶತದೊಂದಿಗೆ ಅಗ್ರಸ್ಥಾನದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಯುಎಸ್ ಮೂಲದ ಕನ್ಸಲ್ಟೆನ್ಸಿ ಸಂಸ್ಥೆಯ ‘ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್ ಟ್ರ್ಯಾಕರ್’ ವರದಿ ಪ್ರಕಾರ ಶೇಕಡಾ 76 ರಷ್ಟು ಜನರು ಪ್ರಧಾನಿ ಮೋದಿಯವರ ನಾಯಕತ್ವವನ್ನು ಅನುಮೋದಿಸಿದ್ದಾರೆ.
ಇನ್ನು 9 ವರ್ಷದಲ್ಲಿ ಪ್ರಧಾನಿ ಮೋದಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳೆದರೇ,
ನೋಟು ಅಮಾನ್ಯೀಕರಣ:
ರಾತ್ರೋರಾತ್ರಿ ಇಡಿ ದೇಶವೇ ಅಚ್ಚರಿ ಪಡುವಂತೆ ಮಾಡಿದ ಮಹತ್ವ ನಿರ್ಧಾರ ನೋಟು ಅಮಾನ್ಯೀಕರಣ. ನವೆಂಬರ್ 8, 2016 ರಂದು ಸಾರ್ವಜನಿಕ ಬಳಕೆಯಿಂದ 500 ಮತ್ತು 1,000 ರೂಪಾಯಿಗಳ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದರು. ಈ ನಿರ್ಧಾರವು ದೇಶದಲ್ಲಿ ಒಂದು ಸಂಚಲನವನ್ನೇ ಸೃಷ್ಟಿತ್ತು. ಇನ್ನು ಈ ಹಠತ್ ನಿರ್ಧಾರಕ್ಕೆ ಕಾರಣವನ್ನು ಕೂಡ ಮೋದಿ ಅವರು ನೀಡಿದ್ದರು. ಅವುಗಳೆಂದರೆ ಕಪ್ಪುಹಣವನ್ನು ನಿಭಾಯಿಸುವುದು, ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಮತ್ತು ಭಯೋತ್ಪಾದಕ ನಿಧಿಯನ್ನು ತಡೆಗಟ್ಟುವುದು.
ಸ್ವಚ್ಛ ಭಾರತ ಅಭಿಯಾನ:
ದೇಶದಲ್ಲಿ ಮಹತ್ವದ ಬದಲಾವಣೆ ಮತ್ತು ಒಂದು ಬಾರಿ ಸ್ವಚ್ಛ ಜಾಗೃತಿಯನ್ನು ಸ್ವಚ್ಛ ಭಾರತ ಅಭಿಯಾನ ರೂಪಿಸಿತ್ತು. ಸ್ವಚ್ಛ ಭಾರತ ಅಭಿಯಾನ ಪ್ರಧಾನಿ ಮೋದಿ ಅವರ ಮಹತ್ವದ ಹಜ್ಜೆಯಾಗಿತ್ತು. ಅಕ್ಟೋಬರ್ 2, 2014 ರಂದು ಗಾಂಧಿ ಜಯಂತಿಯಂದು ಈ ಅಭಿಯಾನವನ್ನು ಪ್ರಾರಂಭಿಸಲಾಗಿತ್ತು. ಇದು ಬಯಲು ಮುಕ್ತ ಶೌಚಾಲಯ ಮತ್ತು ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯ ಗುರಿಯನ್ನು ಹೊಂದಿತ್ತು.
ಜಿಎಸ್ಟಿ ಜಾರಿ:
ಜಿಎಸ್ಟಿ ಜಾರಿ ಕೂಡ ಮೋದಿ ಸರ್ಕಾರದ ಮಹತ್ವ ನಿರ್ಧಾರವಾಗಿತ್ತು. ಸರಕು ಮತ್ತು ಸೇವಾ ತೆರಿಗೆ (GST) ಜುಲೈ 1, 2017 ರಂದು ಜಾರಿಗೆ ಬಂದಿತು. ಈ ಕ್ರಮವು ಪರೋಕ್ಷ ತೆರಿಗೆ ಸುಧಾರಣೆಯು ಕೇಂದ್ರ ಮತ್ತು ರಾಜ್ಯಗಳು ವಿಧಿಸುವ ಬಹು ತೆರಿಗೆಗಳನ್ನು ಬದಲಾಯಿಸಿತು. ಐದು ವರ್ಷಗಳ ಕಾಲ GST (ರಾಜ್ಯಗಳಿಗೆ ಪರಿಹಾರ) ಕಾಯಿದೆ, 2017 ರ ನಿಬಂಧನೆಗಳ ಅಡಿಯಲ್ಲಿ ಇದನ್ನು ಅನುಷ್ಠಾನ ಮಾಡಲಾಗಿತ್ತು. ಇದು ರಾಜ್ಯದ ಆದಾಯದ ನಷ್ಟಕ್ಕೆ ಪರಿಹಾರಕ್ಕೆ ಭರವಸೆಯಾಗಿತ್ತು.
ತ್ರಿವಳಿ ತಲಾಖ್:
ಆಗಸ್ಟ್ 1 2019ರಂದು ವಿರೋಧ ಪಕ್ಷಗಳ ವಿರುದ್ಧ ನಡುವೆಯು ಸರ್ಕಾರವು ತ್ರಿವಳಿ ತಲಾಖ್ ಮಸೂದೆಯನ್ನು ಅಂಗೀಕರಿಸಿತು. ಪತಿ ಮೂರು ಬಾರಿ ತಲಾಖ್ ಹೇಳುವ ಮೂಲಕ ಸಂಬಂಧವನ್ನು ಕಡಿದುಕೊಳ್ಳುವ (ಮುಸ್ಲಿಂರಲ್ಲಿ ಇದು ವಿಚ್ಛೇದನಕ್ಕೆ ಸಮ) ಕ್ರಮಕ್ಕೆ ಮೋದಿ ನೇತೃತ್ವದ ಸರ್ಕಾರ ಎಳ್ಳುನೀರು ಬಿಟ್ಟಿದೆ. ಇದರಿಂದ ಸಹಸ್ರಾರು ಮುಸ್ಲಿಂ ಮಹಿಳೆಯರು ಮೋದಿ ಸರ್ಕಾರದ ಈ ಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
370ನೇ ವಿಧಿಯ ರದ್ದತಿ:
ಪ್ರಧಾನಿ ಮೋದಿ ಸರ್ಕಾರ ಭಾರೀ ಮಹತ್ವ ನಿರ್ಧಾರ 370 ನೇ ವಿಧಿಯ ರದ್ದತಿ, ಇಡಿ ದೇಶವೇ ಒಂದು ಬಾರಿ ಈ ನಿರ್ಧಾರಕ್ಕೆ ತಲೆಬಾಗಿತ್ತು. ಕಾಶ್ಮೀರದಲ್ಲಿ ಭಾರೀ ಸಂಭ್ರಮವನ್ನು ಉಂಟು ಮಾಡಿತ್ತು. ಆಗಸ್ಟ್ 5, 2019 ರಂದು ಭಾರತೀಯ ಸಂವಿಧಾನದ 370 ಮತ್ತು 35(A) ವಿಧಿಗಳನ್ನು ರದ್ದುಗೊಳಿಸಿತು. ಇದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವಾಗಿತ್ತು. ಭಾರತದ ಇತರ ಪ್ರದೇಶಗಳಿಗೆ ಒಂದು ಕಾನೂನು, ಜಮ್ಮು ಮತ್ತು ಕಾಶ್ಮೀರಕ್ಕೆ ಇನ್ನೊಂದು ಕಾನೂನು ಇತ್ತು. ಇದರಿಂದ ಎಲ್ಲರಿಗೂ ಒಂದೇ ಕಾನೂನು ಎನ್ನುವ ಮೂಲಕ ಮೋದಿ ಸರ್ಕಾರ ಈ ಮಹತ್ವ ನಿರ್ಧಾರವನ್ನು ತೆಗೆದುಕೊಂಡಿದೆ. ಇದೀಗ ಅಲ್ಲಿ ಜನ ಶಾಂತಿ ಮತ್ತು ನಮ್ಮೆದಿಯಿಂದ ಬದುಕುತ್ತಿದ್ದಾರೆ.
ಸರ್ಜಿಕಲ್ ಸ್ಟ್ರೈಕ್:
ದೇಶದ ಸೇನೆಯ ನಿಟ್ಟಿನಲ್ಲಿ ಇದು ಮಹತ್ವದ ನಿರ್ಧಾರವಾಗಿತ್ತು. 2016ರ ಸೆಪ್ಟೆಂಬರ್ 18ರಂದು ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನ ಭಯೋತ್ಪಾದಕರು ನಡೆಸಿದ ಹಠಾತ್ ದಾಳಿಯಿಂದ ಭಾರತೀಯ ಸೇನೆಯ 19 ಯೋಧರು ಹುತಾತ್ಮರಾಗಿದ್ದರು. ಇದರಿಂದ ಕುಪಿತಗೊಂಡ ಭಾರತ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಸರ್ಜಿಕಲ್ ಸ್ಟ್ರೈಕ್ ನಡೆಸಲು ಆದೇಶಿಸಿತು. ಈ ಸರ್ಜಿಕಲ್ ಸ್ಟ್ರೈಕ್ನಲ್ಲಿ 40 ಕ್ಕೂ ಹೆಚ್ಚು ಭಯೋತ್ಪಾದಕರು ಕೊಲ್ಲಲ್ಪಟ್ಟರು ಮತ್ತು ಎಲ್ಲಾ ಭಯೋತ್ಪಾದಕ ಲಾಂಚ್ಪ್ಯಾಡ್ಗಳನ್ನು ನಾಶಪಡಿಸಲಾಯಿತು.
ಅಯೋಧ್ಯೆ ರಾಮ ಮಂದಿರ:
ಹಲವು ವರ್ಷಗಳಿಂದ ವಿವಾದದಲ್ಲಿದ್ದ ರಾಮ ಜನ್ಮಭೂಮಿ ಸುಖ್ಯಾಂತ ಕಂಡಿದ್ದು ಮೋದಿ ಪ್ರಧಾನಿಯಾದ ನಂತರ, ಬಳಿಕ ರಾಮಮಂದಿರಕ್ಕೆ ಪ್ರಧಾನಿ ಮೋದಿ ಅವರು ಆಗಸ್ಟ್ 5 2020ರಂದು ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲಿಂದ ಇಲ್ಲಿಯವರೆಗೆ ಅನೇಕ ಕಾರ್ಯಕ್ರಮಗಳನ್ನು ಅಲ್ಲಿ ನಡೆದಿದೆ. ರಾಮಮಂದಿರ ನಿರ್ಮಾಣ ಮಾಡುವುದು ಮೋದಿ ಸರ್ಕಾರದ ಮಹತ್ವ ನಿರ್ಧಾರ ಮತ್ತು ಕನಸು ಕೂಡ ಆಗಿತ್ತು. ಇದೀಗ ರಾಮಮಂದಿರದ ನಿರ್ಮಾಣ ಅಂತ್ಯದಲ್ಲಿದ್ದು, 2024ಕ್ಕೆ ಮಂದಿರ ಲೋಕರ್ಣಾಪಣೆಗೊಳ್ಳಲ್ಲಿದೆ ಎಂದು ಹೇಳಲಾಗಿದೆ.
ಕೋವಿಡ್ ವ್ಯಾಕ್ಸಿನ್:
ಕೊರೊನಾದಿಂದ ಭಾರತ ಸೇರಿದಂತೆ ಇಡೀ ಜಗತ್ತು ಸಂಕಷ್ಟದಲ್ಲಿ ಸಿಲುಕಿಕೊಂಡಿತ್ತು. ಭಾರತದಲ್ಲಿ ಕೊರೊನಾ ಸೋಂಕುನ್ನು ನಿಭಾಯಿಸುವಲ್ಲಿ ಮೋದಿ ಸರ್ಕಾರ ಮಹತ್ವ ನಿರ್ಧಾರಗಳನ್ನು ತೆಗೆದುಕೊಂಡಿತ್ತು. ಈ ಸಮಯದಲ್ಲಿ ಸರ್ಕಾರ ಜನರ ಸಹಾಯಕ್ಕೆ ಧಾವಿಸಿ, ಜತೆಗೆ ಕೊರೊನಾ ತಡೆಗಟ್ಟಲು ವ್ಯಾಕ್ಸಿನ್ನ್ನು ಯಶಸ್ವಿಯಾಗಿ ಪರಿಚಯಿತು. ಇದು ದೇಶದ ಜನರ ಜೀವರಕ್ಷಾವಾಗಿ ಕೆಲಸ ಮಾಡಿತ್ತು. ಯಶಸ್ವಿ ಸಂಶೋಧನೆಯನ್ನು ಭಾರತದ ವೈದ್ಯಲೋಕ ಮಾಡಿತ್ತು. ಸಂಶೋಧನೆಗೆ ಬೇಕಾದ ಎಲ್ಲ ರೀತಿಯ ಸಹಕಾರವನ್ನು ಮೋದಿ ಸರ್ಕಾರ ಮಾಡಿತ್ತು. ಈ ವಿಚಾರವಾಗಿ ಇಡೀ ಜಗತ್ತು ಭಾರತವನ್ನು ಪ್ರಶಂಸಿತ್ತು.
ನೂತನ ಸಂಸತ್ ಭವನ:
ದೇಶದ ಸಂವಿಧಾನದ ಮೂಲಕ ಸ್ಥಾಪಿತವಾದ ಸಂಸತ್ ಭವನಕ್ಕೆ ನೂತನ ಆಯಾಮ ನೀಡಿದ್ದು ಮೋದಿ ಸರ್ಕಾರ. ದೇಶದ ಸುಂದರವಾದ ನೂತನ ಸಂಸತ್ ಭವನವನ್ನು ಮೋದಿ ಅವರು ಮೇ 28, 2023ರಂದು ಲೋಕರ್ಣಾಪಣೆ ಮಾಡಿದರು. ಇದು ದೇಶದ ದಿಕ್ಕುನ್ನು ಬದಲಾಯಿಸುವ ಇತಿಹಾಸವನ್ನು ಸೃಷ್ಟಿಸಿತ್ತು. ಈ ನೂತನ ಸಂಸತ್ ಭವನ ಸಂಸತ್ತಿನ ಹಳೆಯ ಕ್ರಮಗಳನ್ನು ಮುರಿದು, ಹೊಸ ವಿಚಾರಗಳಿಗೆ ನಾಂದಿ ಹಾಡಿತ್ತು. ಇನ್ನು ಈ ನೂತನ ಸಂಸತ್ ಭವನದಲ್ಲಿ ಸೆ.18ರಿಂದ ಸೆ.22ರವರೆಗೆ ಸಂಸತ್ನಲ್ಲಿ ವಿಶೇಷ ಅಧಿವೇಶನ ನಡೆಯಲ್ಲಿದೆ.
ಜಿ.20 ಶೃಂಗಸಭೆ:
ವಿಶ್ವದ ನಾಯಕರು ಮೆಚ್ಚಿಕೊಂಡ ಜಿ-20 ಸಭೆ ಎಂದರೆ ಅದು ಭಾರತದಲ್ಲಿ ನಡೆದ ಜಿ.20 ಶೃಂಗಸಭೆಯನ್ನು. ಭಾರತದ ಗ್ರಾಮಕ್ಕೂ ಈ ಸಭೆಯ ಕಂಪು ಹರಡಿದೆ. ದೇಶ- ವಿದೇಶದ ನಾಯಕರು ಒಂದು ಬಾರಿ ಭಾರತವನ್ನು ನೋಡುವಂತೆ ಮಾಡಿದ್ದು ಈ ಶೃಂಗಸಭೆ, ಮೋದಿ ನೇತೃತ್ವದಲ್ಲಿ ನಡೆದ 2 ದಿನಗಳ (ಸೆ.9,10) ಜಿ-20 ಶೃಂಗಸಭೆಗೆ ವಿಶ್ವದ ಅನೇಕ ನಾಯಕರು ಭಾರತದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಈ ಸಭೆಯಲ್ಲಿ ಮೋದಿ ಅವರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದರು.
ಭಾರತದ ಆರ್ಥಿಕ ಸುಧಾರಣೆ:
ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸುಧಾರಣಾ ಕ್ರಮಗಳನ್ನು ತರಲಾಗಿದೆ. ಕಳೆದ ಒಂದು ವರ್ಷದಲ್ಲೇ ಭಾರತ ಸಾಕಷ್ಟು ಗಮನಾರ್ಹ ಬೆಳವಣಿಗೆಗಳನ್ನು ಕಂಡಿದೆ.ಭಾರತದ ಜಿಡಿಪಿ ಬಹಳ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ. ಕಳೆದ ವರ್ಷ 2022ರ ಜುಲೈನಿಂದ ಸೆಪ್ಟೆಂಬರ್ವರೆಗಿನ ಕ್ವಾರ್ಟರ್ನಲ್ಲಿ ಭಾರತದ ಜಿಡಿಪಿ ಶೇ 6.3ರಷ್ಟು ಬೆಳೆದಿತ್ತು. ನಂತರ ಕ್ವಾರ್ಟರ್ನಲ್ಲಿ ಶೇ. 4.4 ಮತ್ತು ಶೇ. 6.1ರಷ್ಟು ಬೆಳವಣಿಗೆ ಹೊಂದಿತ್ತು. 2023-24ರ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಜಿಡಿಪಿ ಶೇ. 7.8ರ ದರದಲ್ಲಿ ಬೆಳೆದು ಇಡೀ ವಿಶ್ವದ ಗಮನ ಸೆಳೆದಿದೆ. ಹಣದುಬ್ಬರವೂ ಕೂಡ ಸಾಕಷ್ಟು ಇಳಿಕೆ ಕಂಡಿದೆ. ಈ ವರ್ಷದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಶೇ. 6ಕ್ಕಿಂತಲೂ ಹೆಚ್ಚಿರುವುದು ಬಿಟ್ಟರೆ ಉಳಿದಂತೆ ಕಳೆದ ಒಂದು ವರ್ಷದಲ್ಲಿ ಹಣದುಬ್ಬರ ಬಹುತೇಕ ಅಂಕೆಯಲ್ಲಿತ್ತು.
ಪ್ರಧಾನಿ ಮೋದಿ ಅವರ ವೇತನ:
ಇನ್ನು ಪ್ರಧಾನಿ ಮೋದಿ ಅವರ ವೇತನ ಬಗ್ಗೆ ಹೇಳುವುದಾದರೇ, ಇಷ್ಟಕ್ಕೂ ಪ್ರಧಾನ ಮಂತ್ರಿ ಹೊಣೆಗಾರಿಕೆಗೆ ಹೂವಿನ ಹಾಸಿಗೆ ಅಲ್ಲ ಎಂಬುದು ಸ್ಪಷ್ಟ. ಪ್ರಧಾನ ಮಂತ್ರಿ ಎಂದರೆ ದೇಶವನ್ನು ಮುನ್ನಡೆಸುವ ಆಡಳಿತ ವ್ಯವಸ್ಥೆಯ ನಾಯಕ ಸ್ಥಾನ. ಪ್ರಸ್ತುತ ಆ ಹೊಣೆಗಾರಿಕೆಯನ್ನು ಮೋದಿ ನಿಭಾಯಿಸುತ್ತಿದ್ದಾರೆ. ಅವರು ಸಚಿವ ಸಂಪುಟ ಮತ್ತು ರಾಷ್ಟ್ರಪತಿ ಅವರ ನಡುವೆ ಸಂಪರ್ಕ ಮತ್ತು ಸಂವಹನದ ಕೊಂಡಿಯಾಗಿ ಕೆಲಸ ಮಾಡುತ್ತಾರೆ.
ಸಚಿವ ಸಂಪುಟದಲ್ಲಿ ಖಾತೆಗಳನ್ನು ಹಂಚಿ ಅವುಗಳ ಕೆಲಸ ಕಾರ್ಯಗಳ ನಿರ್ವಹಣೆ ಗಮನಿಸುವುದು ಪ್ರಧಾನಿಯ ಹೊಣೆಗಾರಿಕೆ. ಎಲ್ಲ ಖಾತೆಗಳನ್ನೂ ಅವರು ಹಂಚಿಕೆ ಮಾಡುವುದಿಲ್ಲ. ಸಿಬ್ಬಂದಿ, ಸಾರ್ವಜನಿಕ ಅಹವಾಲು, ಪಿಂಚಣಿ ಖಾತೆ, ಯೋಜನಾ ಖಾತೆ, ಆಟೋಮಿಕ್ ಎನರ್ಜಿ, ಬಾಹ್ಯಾಕಾಶ ಖಾತೆ, ಕ್ಯಾಬಿನೆಟ್ ಅಪಾಯಿಂಟ್ಮೆಂಟ್ಸ್ ಕಮಿಟಿ ಮುಂತಾದವುಗಳನ್ನು ಪ್ರಧಾನಿ ತಮ್ಮಬಳಿಯೇ ಇರಿಸಿಕೊಳ್ಳುತ್ತಾರೆ.
ಪ್ರಧಾನ ಮಂತ್ರಿಯಾಗಿ ಅವರು ಎಷ್ಟು ವೇತನ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಇದ್ದೇ ಇದೆ. ಕಳೆದ ವರ್ಷದ ಅಧಿಕೃತ ಮಾಹಿತಿ ಪ್ರಕಾರ, ವಾರ್ಷಿಕ ವೇತನ 19.92 ಲಕ್ಷ ರೂಪಾಯಿ.
ಪ್ರಧಾನಿ ಮೋದಿ ಅವರ ವಾರ್ಷಿಕ ವೇತನ 19.92 ಲಕ್ಷ ರೂಪಾಯಿ. ಇದರ ಪ್ರಕಾರ, ತಿಂಗಳ ವೇತನ 1.6 ಲಕ್ಷ ರೂಪಾಯಿ. ಇದರಲ್ಲಿ 50,000 ರೂಪಾಯಿ ಮೂಲ ವೇತನ. ದಿನ ಭತ್ಯ 62,000 ರೂಪಾಯಿ, ಎಂಪಿ ಭತ್ಯೆ 45,000 ರೂಪಾಯಿ ಇನ್ನು ಉಳಿದವು ಕೂಡ ಭತ್ಯೆಗಳೇ ಎಂದು ಟೈಮ್ಸ್ ನೌ ಕಳೆದ ವರ್ಷ ಪ್ರಕಟಿಸಿದ ವರದಿ ಹೇಳಿದೆ.
ದೇಶಾದ್ಯಂತ ‘ಆಯುಷ್ಮಾನ್ ಭವ’ ಅಭಿಯಾನ:
ಕೇಂದ್ರ ಸರ್ಕಾರದ ಮಹತ್ವಾಂಕ್ಷಿಯ ಯೋಜನೆಗಳಲ್ಲಿ ಒಂದಾದ ‘ಆಯುಷ್ಮಾನ್ ಭವ’ ಯೋಜನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆ.13ರಂದು ಚಾಲನೆ ನೀಡಿದರು. ಇನ್ನು ಈ ಯೋಜನೆಯ ಅಭಿಯಾನವನ್ನು ಸೆ.17ರಂದು ಅಂದರೆ ಇಂದು ಪ್ರಧಾನಿ ಮೋದಿ ಅವರ ಜನ್ಮದಿನದಂದು ನಡೆಸಲಾಗುವುದು. ಇನ್ನು ಆಯುಷ್ಮಾನ್ ಭವ ಅಭಿಯಾನವು ಕೇಂದ್ರ ಸರ್ಕಾರದ ಎಲ್ಲಾ ಆರೋಗ್ಯ ಯೋಜನೆಗಳ ಸಮಗ್ರ ಗುಚ್ಚವಾಗಿದೆ. ಕೇಂದ್ರ ಸರ್ಕಾರ ಈವರೆಗೆ ಜಾರಿಗೆ ತಂದಿರುವ ಎಲ್ಲಾ ಆರೋಗ್ಯ ಸೇವಾ ಯೋಜನೆಗಳ ಕುರಿತಾಗಿಯೂ ಈ ಅಭಿಯಾನದಲ್ಲಿ ಮಾಹಿತಿ ಸಿಗಲಿದೆ.
ಇಡೀ ದೇಶದ ಉದ್ದಲಗಕ್ಕೂ ಇರುವ ಅತ್ಯಂತ ಬಡ ಕುಟುಂಬವನ್ನೂ ತಲುಪಿ ಅವರ ಹಸಿವು ನೀಗಿಸುವ ಉದ್ದೇಶವನ್ನ ಅಂತ್ಯೋದಯ ಅನ್ನ ಯೋಜನೆ ಹೊಂದಿದೆ. ಇದೇ ಪರಿಕಲ್ಪನೆ ಹಾಗೂ ದೂರದೃಷ್ಟಿಯನ್ನು ಆರೋಗ್ಯ ಯೋಜನೆಗೂ ಅನ್ವಯಿಸಲು ಉದ್ದೇಶಿಸಲಾಗಿದೆ. ಪ್ರತಿಯೊಂದು ಗ್ರಾಮ ಮಟ್ಟದಲ್ಲೂ ಆರೋಗ್ಯ ಸೇವೆ ತಲುಪಿಸುವ ಯೋಜನೆ ಇದಾಗಿದ್ದು, ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುವ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಕೇಂದ್ರ ಸರ್ಕಾರದ ಎಲ್ಲ ಆರೋಗ್ಯ ಯೋಜನೆಗಳ ಗುಚ್ಛವಾದ ಆಯುಷ್ಮಾನ್ ಭವ ಅಭಿಯಾನವನ್ನು ಮನೆ ಮನೆಗೂ ತಲುಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ‘ಆಯುಷ್ಮಾನ್ ಆಪ್ ಕೆ ದ್ವಾರ್ 3.0’ ಅಭಿಯಾನ ನಡೆಯಲಿದೆ. ಈ ಅಭಿಯಾನದಡಿ ಫಲಾನುಭವಿಗಳ ಪ್ರತಿ ಮನೆಗೂ ಆಯುಷ್ಮಾನ್ ಕಾರ್ಡ್ಗಳನ್ನು ವಿತರಣೆ ಮಾಡಲಾಗುತ್ತದೆ. ಜೊತೆಯಲ್ಲೇ ಆಯುಷ್ಮಾನ್ ಮೇಳ ಕೂಡಾ ಆಯೋಜನೆಯಾಗಿದೆ.