ನವದೆಹಲಿ: ಯುಪಿಎ ಸರಕಾರ ಯೋಜನೆಗಳನ್ನು ಆರಂಭಿಸುವುದಾಗಿ ಕೇವಲ ಭರವಸೆಗಳನ್ನು ಮಾತ್ರ ನೀಡಿದ್ದು, ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಆ ಭರವಸೆಗಳನ್ನು ಈಡೇರಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕಳೆದ ಒಂಬತ್ತು ವರ್ಷಗಳಲ್ಲಿ ವಿದ್ಯುತ್ ಸೌಲಭ್ಯಗಳಿಂದ ಹಿಡಿದು ಶೌಚಾಲಯದವರೆಗೆ ಬಿಜೆಪಿ ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸಿದೆ. ಆದ್ದರಿಂದ, ಭಾರತವು ಈಗ ತನ್ನ ಭವಿಷ್ಯದ ಬೆಳವಣಿಗೆಯ ಬಗ್ಗೆ ಆಶಾವಾದಿ ಮತ್ತು ಧನಾತ್ಮಕವಾಗಿರುವ ಅಪರೂಪದ ಸ್ಥಾನದಲ್ಲಿದೆ ಎಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಇಂದು ಉತ್ತರಿಸುತ್ತಾ ವಿತ್ತ ಸಚಿವೆ ಮಾತನಾಡಿದರು.
“2013 ರಲ್ಲಿ, ಮೋರ್ಗನ್ ಸ್ಟಾನ್ಲಿ ಭಾರತವನ್ನು ವಿಶ್ವದ ಐದು ದುರ್ಬಲ ಆರ್ಥಿಕತೆಯ ಪಟ್ಟಿಯಲ್ಲಿ ಸೇರಿಸಿದ್ದರು. ಭಾರತ ದೇಶವನ್ನು ದುರ್ಬಲ ಆರ್ಥಿಕ ದೇಶ ಎಂದು ಘೋಷಿಸಲಾಗಿತ್ತು. ಇಂದು ಅದೇ ಮಾರ್ಗನ್ ಸ್ಟಾನ್ಲಿ ಭಾರತವನ್ನು ಮೇಲ್ದರ್ಜೆಗೇರಿಸಿ ಹೆಚ್ಚಿನ ರೇಟಿಂಗ್ ನೀಡಿದೆ.
ಕೇವಲ 9 ವರ್ಷಗಳಲ್ಲಿ, ಕೋವಿಡ್ ಸಾಂಕ್ರಾಮಿಕದ ಹೊರತಾಗಿಯೂ ನಮ್ಮ ಸರ್ಕಾರದ ನೀತಿಗಳಿಂದಾಗಿ ಆರ್ಥಿಕತೆಯು ಏರಿಕೆಯಾಗಿ ಅಭಿವೃದ್ಧಿ ಕಂಡಿದೆ. ಇಂದು ನಾವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ದೇಶ ಎಂಬ ಕೀರ್ತಿಗೆ ಭಾಜನರಾಗಿದ್ದೇವೆ ಎಂದರು.