ನವದೆಹಲಿ: ಕಳೆದ ಗುಜರಾತ್ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ರಾವಣ ಎಂದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅದಕ್ಕಾಗಿ ತೀವ್ರತರ ಟೀಕೆ ಎದುರಿಸಿದ್ದರು. ಈಗ ಸ್ವತಃ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರಧಾನಿ ಮೋದಿಯನ್ನು ರಾವಣಗೆ ಹೋಲಿಸಿ ಟೀಕೆ ಮಾಡಿದ್ದಾರೆ. ಇಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆಯ ವೇಳೆ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ರಾವಣನಿಗೆ ಹೋಲಿಸಿ ಪ್ರಧಾನಿಯನ್ನು ಟೀಕಿಸಿದರು.
ಇದಕ್ಕೆ ಸ್ಪೀಕರ್ ಆಕ್ಷೇಪ ವ್ಯಕ್ತಪಡಿಸಿದರು. ಇಂಥ ಮಾತುಗಳು ಸದನಕ್ಕೆ ಶೋಭೆ ತರುವುದಿಲ್ಲ ಎಂದಿದ್ದಾರೆ.
‘ಭಾರತದ ಮಾತೆಯನ್ನು ಮಣಿಪುರದಲ್ಲಿ ನೀವು ಹತ್ಯೆ ಮಾಡಿದ್ದೀರಿ. ಮಣಿಪುರದಲ್ಲಿ ದೇಶದ ಹತ್ಯೆ ಮಾಡಿರುವ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮಣಿಪುರಕ್ಕೆ ಹೋಗಲು ಸಾಧ್ಯವಿಲ್ಲ. ನೀವು ಭಾರತ ಮಾತೆಯನ್ನು ಕಾಪಾಡುವವರಲ್ಲ. ಆಕೆಯನ್ನು ಹತ್ಯೆ ಮಾಡುವವರು’ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ‘ಲೋಕಸಭೆಯಲ್ಲಿ ಮಾತನಾಡುವ ಸಂಸದರಿಗೆ ಹೇಳುವ ಮಾತು, ಭಾರತ ನಮ್ಮ ಮಾತೆ. ಸದನದಲ್ಲಿ ಈ ವಿಚಾರವನ್ನು ಮಾತನಾಡುವಾಗ ಸಂಯಮ ಇರಬೇಕು’ ಎಂದು ಸ್ಪೀಕರ್ ಓಂ ಬಿರ್ಲಾ, ರಾಹುಲ್ ಗಾಂಧಿಗೆ ಎಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ನಾನು ಮಣಿಪುರದಲ್ಲಿ ನನ್ನ ತಾಯಿಯ ಹತ್ಯೆಯಾಗಿರುವ ಬಗ್ಗೆ ಮಾತನಾಡುತ್ತಿದ್ದೇನೆ. ಭಾರತದ ಸೇನೆ ಮಣಿಪುರದಲ್ಲಿ ಒಂದೇ ದಿನ ಶಾಂತಿ ತರಬಲ್ಲುದು. ನೀವು ಸೇನೆಯನ್ನು ಬಳಸಿಕೊಳ್ಳುತ್ತಿಲ್ಲ. ಯಾಕೆಂದರೆ ನೀವು ಹಿಂದುಸ್ತಾನವನ್ನು ಮಣಿಪುರದಲ್ಲಿ ಸಾಯಿಸಲು ಪ್ರಯತ್ನಿಸುತ್ತಿದ್ದೀರಿ. ದೇಶದ ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ದನಿಯನ್ನು ಕೇಳುತ್ತಿಲ್ಲ ಎಂದಾದಲ್ಲಿ, ಇನ್ಯಾರ ದನಿಯನ್ನು ಕೇಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ರಾವಣ ಇಬ್ಬರ ಮಾತುಗಳನ್ನು ಕೇಳುತ್ತಿದ್ದ. ಮೇಘನಾಥ ಹಾಗೂ ಕುಂಭಕರ್ಣ. ಅದೇ ರೀತಿ ನರೇಂದ್ರ ಮೋದಿ ಇಬ್ಬರ ಮಾತನ್ನು ಮಾತ್ರವೇ ಕೇಳುತ್ತಾರೆ. ಅವರೆಂದರೆ ಅಮಿತ್ ಶಾ ಹಾಗೂ ಗೌತಮ್ ಅದಾನಿ. ಲಂಕೆಯನ್ನು ಸುಟ್ಟಿದ್ದು ಹನುಮಂತನಲ್ಲ. ಲಂಕೆಯನ್ನು ಸುಟ್ಟಿದ್ದು ರಾವಣನ ಅಹಂಕಾರ. ರಾಮ ಎಂದೂ ರಾವಣನನ್ನು ಕೊಲ್ಲಲಿಲ್ಲ. ರಾವಣನ ಅಹಂಕಾರವೇ ರಾವಣನನ್ನು ಸಾಯಿಸಿತು ಎಂದು ಹೇಳಿದ್ದಾರೆ.