ಮುಂಬೈ: ಅದಾನಿ ಪ್ರಕರಣದ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸಬೇಕೆಂಬ ಬೇಡಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಪುನರುಚ್ಚರಿಸಿದ್ದಾರೆ.
ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರದಲ್ಲಿ ಮೌನ ಮುರಿಯಬೇಕು ಎಂದು ಆಗ್ರಹಿಸಿದ್ದಾರೆ. ವಿರೋಧ ಪಕ್ಷಗಳ ಇಂಡಿಯಾ ಸಭೆಗೆ ಮುನ್ನ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು OCCRP (ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ) ಯ ಹೊಸ ವರದಿಯನ್ನು ಉಲ್ಲೇಖಿಸಿದರು. ನಿಗೂಢ” ಹೂಡಿಕೆದಾರರು ಸಾಗರೋತ್ತರ ವ್ಯವಹಾರ ಮೂಲಕ ಅದಾನಿ ಷೇರುಗಳನ್ನು ಖರೀದಿಸಿ ಮಾರಾಟ ಮಾಡಿದ ಕನಿಷ್ಠ ಎರಡು ಪ್ರಕರಣಗಳು ವರದಿಯಾಗಿವೆ.
ಈ ಹಿಂದೆ ಅದಾನಿ ಷೇರು ಖರೀದಿ ಅವ್ಯವಹಾರ ಕುರಿತು ಸೆಬಿಗೆ ದೂರು ನೀಡಿದ್ದೆವು. ಆದರೆ ಸೆಬಿ ಗೌತಮ್ ಅದಾನಿ ಅವರಿಗೆ ಕ್ಲೀನ್ ಚಿಟ್ ನೀಡಿತು. ಯಾರು ಅಂದು ಅದಾನಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದರೋ ಅವರೇ ಇಂದು ಎನ್ಡಿಟಿವಿಯ ನಿರ್ದೇಶಕರಾಗಿದ್ದಾರೆ. ಇದು ನಿಜವಾಗಿಯೂ ಅನುಮಾನ ಹುಟ್ಟಿಸುವ ಬೆಳವಣಿಗೆ ಎಂದರು.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, “ಪ್ರಧಾನಿ ಅವರ ನಿಕಟವರ್ತಿಯಾದ ಈ ವ್ಯಕ್ತಿಯೊಬ್ಬರು (ಅದಾನಿ) ತಮ್ಮ ಷೇರುಗಳ ಬೆಲೆಯನ್ನು ಹೆಚ್ಚಿಸಲು ವಾಮಮಾರ್ಗ ಅನುಸರಿಸುತ್ತಿದ್ದಾರೆ. ಅಲ್ಲದೇ ಅದೇ ಷೇರು ಹಣದಿಂದ ಭಾರತ ಸರ್ಕಾರದ ಆಸ್ತಿಗಳಾದ ವಿಮಾನ ನಿಲ್ದಾಣಗಳು, ಬಂದರುಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದರು.
ಆದರೆ ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಏಕೆ ತನಿಖೆಗೆ ಅವಕಾಶ ನೀಡುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅವರು ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು. ಜಿ20 ಸಭೆಗೆ ಜಾಗತಿಕ ನಾಯಕರು ಭಾರತಕ್ಕೆ ಆಗಮಿಸುವ ಮುನ್ನವೇ ಇಂತಹ ವಿಚಾರಗಳು ಪ್ರಧಾನಿ ಕಾರ್ಯವೈಖರಿ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ ಎಂದು ರಾಹುಲ್ ಹೇಳಿದರು.