ಹುಮನಾಬಾದ್ : ಸುಡು ಬಿಸಿಲು ಹಾಗೂ ಬೆಂಗಳೂರಿನಿಂದ ಬಂದು ಭಾಲ್ಕಿ ಹಾಗೂ ಹುಮನಾಬಾದ್ನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಸುಸ್ತಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹುಮನಾಬಾದ್ ತಹಶೀಲ್ದಾರ್ ಕಚೇರಿ ಬಳಿಯ ಚಿಕ್ಕ ಹೋಟೆಲ್ನಲ್ಲಿ ಮಂಡಕ್ಕಿ ಸೇವಿಸಿ ದಣಿವು ನೀಗಿಸಿಕೊಂಡರು.
ಪಟ್ಟಣದಲ್ಲಿ ಆಯೋಜಿಸಿದ್ದ ಜನ ಕ್ರಾಂತಿ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಹೈದರಾಬಾದ್ ಕಡೆಗೆ ಹೋಗಲು ರಾಜಶೇಖರ ಪಾಟೀಲ ಅವರೊಂದಿಗೆ ಕಾರಿನಲ್ಲಿ ಕುಳಿತು ಸಾಗಿದರು. ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ ಕಿಟಕಿಯಿಂದ ಹೊರಗೆ ನೋಡುತ್ತ ‘ಇಲ್ಲಿ ಚೆನ್ನಾಗಿ ಚಹಾ ಸಿಗುತ್ತದೆಯೇ’ ಎಂದು ಕೇಳಿದರು.
ರಾಜಶೇಖರ ಪಾಟೀಲ, ‘ಹೌದು ಸರ್ ಒಳ್ಳೆಯ ಚಹಾ ಹಾಗೂ ತಿಂಡಿ ಎರಡೂ ಸಿಗುತ್ತದೆ’ ಎಂದು ಹೇಳಿ ಹಳೇ ತಹಶೀಲ್ದಾರ್ ಕಚೇರಿ ಮುಂಭಾಗದ ಎಸ್.ಎಂ. ಸ್ವೀಟ್ಸ್ ಮತ್ತು ಟಿಫಿನ್ ಸೆಂಟರ್ ಬಳಿ ಕಾರು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದರು.
ಕಾರಿನಿಂದ ಇಳಿದ ರಾಹುಲ್ ಗಾಂಧಿ ಹಾಗೂ ರಾಜಶೇಖರ ಪಾಟೀಲ ಅವರು ಹೋಟೆಲ್ಗೆ ತೆರಳಿ ಖೋವಾ, ಜಾಮೂನ್ ಹಾಗೂ ಮಂಡಕ್ಕಿ ಸೇವಿಸಿದರು. ನಂತರ ಚಹಾ ಸೇವಿಸಿ ದಣಿವು ಆರಿಸಿಕೊಂಡರು. ಸಿಹಿ ತಿಂಡಿ ಮಾಡಿರುವುದಕ್ಕೆ ಹೋಟೆಲ್ ಮಾಲೀಕರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹೋಟೆಲ್ ಮಾಲೀಕ ಸೈಯದ್ ಮೋಸಿನ್ ಅಲಿ ಮಾತನಾಡಿ, ‘ರಾಹುಲ್ ಗಾಂಧಿ ಕಾರಿನಿಂದ ಇಳಿದು ನೇರವಾಗಿ ನಮ್ಮ ಹೋಟೆಲ್ಗೆ ಬಂದರು. ಒಂದು ಕ್ಷಣ ನನಗೆ ಏನೂ ತಿಳಿಯದಾಯಿತು. ಗೌಡರು ಸಹ ಜತೆಗಿದ್ದರಿಂದ ಧೈರ್ಯ ಬಂದಿತು. ಉಪಾಹಾರ ಸೇವಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜಶೇಖರ ಪಾಟೀಲ ಉಪಾಹಾರದ ಬಿಲ್ ಪಾವತಿಸಿದರು’ ಎಂದು ಹೇಳಿದರು.