ಮಧ್ಯಪ್ರದೇಶ : ಕೊಲೆ ಮಾಡುವವರು ತುಂಬಾ ಬುದ್ಧಿವಂತಿಕೆ ಉಪಯೋಗಿಸಿ ಕೊಲೆ ಮಾಡಿರುತ್ತಾರೆ. ತಾವು ಕೊಲೆ ಮಾಡಿದ್ದಕ್ಕೆ ಯಾವುದೇ ಸಾಕ್ಷಿ ಸಿಗಬಾರದು ಅಂತ ಹರಸಾಹಸ ಪಟ್ಟಿರುತ್ತಾರೆ. ಕೊಲೆ ಮಾಡಿದ ಜಾಗದಲ್ಲಿ ಸಿಗುವ ಸಾಕ್ಷಿಗಳನ್ನೆಲ್ಲ ನಾಶ ಮಾಡಿರುತ್ತಾರೆ.
ಈ ಮೂಲಕ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಂಡು, ಜೈಲು ಶಿಕ್ಷೆಯಿಂದ ಬಚಾವಾಗುವ ಪ್ಲಾನ್ ಮಾಡ್ತಾರೆ. ಆದರೆ ಒಮ್ಮೊಮ್ಮೆ ಎಡವಿ ಬಿಟ್ಟಿರುತ್ತಾರೆ. ಕೊಲೆ ಪಾತಕಿಗಳು ಎಷ್ಟೇ ಬುದ್ಧಿವಂತರಾಗಿದ್ದರೂ ಪೊಲೀಸರು ಅವರನ್ನು ಬಲೆಗೆ ಬೀಳಿಸುವುದರಲ್ಲಿ ಯಶಸ್ವಿಯಾಗ್ತಾರೆ. ಹಂತಕರು ಚಾಪೆ ಕೆಳಕ್ಕೆ ತೂರಿಕೊಂಡರೆ, ಖಾಕಿಗಳು ರಂಗೋಲಿ ಕೆಳಗೇ ತೂರಿಕೊಳ್ಳುತ್ತಾರೆ. ಕೊಲೆಯಾದ ಸ್ಥಳದಲ್ಲಿ ಸಿಕ್ಕ ಚಿಕ್ಕ ವಸ್ತುಗಳೂ ಸಹ ಒಮ್ಮೊಮ್ಮೆ ಕೊಲೆಗಾರನ ಗುರುತು ಹೇಳಿಯೇ ಬಿಡುತ್ತೆ. ಇದೇ ರೀತಿ ಮಹತ್ವದ ಘಟನೆಯೊಂದು ಮಧ್ಯಪ್ರದೇಶದಲ್ಲೂ ನಡೆದಿದೆ.
ಮಧ್ಯಪ್ರದೇಶದ ಇಂದೋರ್ನ ಕೇದಾರನಗರದಲ್ಲಿ ಈ ಒಂದು ಘಟನೆ ನಡೆದಿದೆ. ಕೆಲವು ದಿನಗಳ ಹಿಂದೆ ಕೊಲೆಯೊಂದು ನಡೆದಿತ್ತು. ಮೃತ ವ್ಯಕ್ತಿಯನ್ನು 32 ವರ್ಷದ ದೀಪಿಕ್ ಮಾಣಿಕ್ ಎಂದು ಪೊಲೀಸರು ಗುರುತಿಸಿದ್ದಾರೆ. ರಾತ್ರಿ ದೀಪಕ್ ಕೊಲೆಯಾಗಿದ್ದು, ಶವ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಲೆಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪಿದ್ದಾರೆ ಅತ ವೈದ್ಯರು ತಿಳಿಸಿದ್ರು. ಆಗ ಪೊಲೀಸರು ಅಲರ್ಟ್ ಆದ್ರು.
ಪೋಸ್ಟ್ ಮಾರ್ಟಮ್ ರಿಪೋರ್ಟ್ ಪಡೆದ ಪೊಲೀಸರು ಸ್ಥಳದಲ್ಲಿ ಸೂಕ್ಷವಾಗಿ ಪರಿಶೀಲನೆ ಮಾಡಿದ್ರು. ಆದ್ರೆ ಕೊಲೆಗಾರರನ್ನು ಗುರುತಿಸಲು ಬೇಕಾದ ಯಾವುದೇ ಪುರಾವೆ ಸಿಗಲೇ ಇಲ್ಲ. ಹೇಗಪ್ಪಾ ಈ ಕೊಲೆ ರಹಸ್ಯ ಹೊರಗೆಡವೋದು ಅಂತ ತಲೆ ಕೆರೆದುಕೊಂಡು ಕುಳಿತಿದ್ದರು. ಆಗ ಸಿಕ್ಕಿತ್ತು ಅಲ್ಲೊಂದು ಲೇಡಿಸ್ ಚಪ್ಪಲಿ.
ಯೆಸ್. ಕೊಲೆಯಾದ ದೀಪಕ್ ಮಾಣಿಕ್ ಶವದ ಬಳಿಯೇ ಇದ್ದ ಲೇಡಿಸ್ ಚಪ್ಪಲಿ ಪೊಲೀಸರಿಗೆ ಅನುಮಾನ ಮೂಡಿಸಿತ್ತು. ಆ ಚಪ್ಪಲಿ ನೋಡ್ತಿದ್ದಂತೆ ಕೊಲೆ ಹಿಂದೆ ಮಹಿಳೆಯೊಬ್ಬರ ಕೈವಾಡ ಇರೋದು ದಟ್ಟವಾಯ್ತು. ಹಾಗಿದ್ರೆ ಆ ಚಪ್ಪಲಿ ಯಾರದ್ದು ಅನ್ನೋ ಪರಿಶೀಲನೆಯಲ್ಲಿ ತೊಡಗಿದ್ರು. ದೀಪಕ್ ಹಿನ್ನೆಲೆಯೆಲ್ಲಾ ಜಾಲಾಡಿದ್ರು. ಅವನ ಮೊಬೈಲ್ ಕರೆಗಳನ್ನು ಪರಿಶೀಲಿಸಲಾಯ್ತು.
ಕೊಲೆಯಾದ ದೀಪಕ್ ಮಾಣಿಕ್ 55 ವರ್ಷದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಆಕೆ ಹೆಸರು ಮಂಗಳಾ ಅಂತ ಗುರುತಿಸಲಾಗಿದೆ. ಇದಕ್ಕೂ ಮುನ್ನ ಆತ ಎರಡು ಮದುವೆಯಾಗಿದ್ದ ಎನ್ನಲಾಗಿದೆ. ಅದಾದ ಬಳಿಕ ಮಂಗಳಾ ಜೊತೆ ಸಲುಗೆ ಬೆಳೆದು, ಅಕ್ರಮ ಸಂಬಂಧಕ್ಕೆ ತಿರುಗಿದೆ. ಕೆಲ ದಿನಗಳ ಹಿಂದಷ್ಟೇ ದೇವಸ್ಥಾನದಲ್ಲಿ ಆಕೆಯನ್ನು ಮದುವೆಯಾಗಿದ್ದಾನೆ ಅಂತ ಕೆಲ ಸ್ಥಳೀಯರು ಹೇಳಿದ್ದಾರೆ.
ಸದಾ ಕಾಲ ದೀಪಕ್ ಜೊತೆಯೇ ಇರುತ್ತಿದ್ದ ಮಂಗಳಾ ಆತನ ಕೊಲೆಯಾಗ್ತಿದ್ದಂತೆ ನಾಪತ್ತೆಯಾಗಿದ್ದಳು. ಫೋನ್ ಕರೆಗಳು ಹಾಗೂ ಸ್ಥಳದಲ್ಲಿ ಸಿಕ್ಕಿದ್ದ ಚಪ್ಪಲಿ ಆಧಾರದ ಮೇಲೆ ದೀಪಕ್ ಹತ್ಯೆ ಹಿಂದೆ ಮಂಗಳಾ ಕೈವಾಡ ಇರುವುದಾಗಿ ಪೊಲೀಸರು ಪತ್ತೆ ಹಚ್ಚಿದ್ರು. ಆಕೆಯನ್ನು ಠಾಣೆಗೆ ಕರೆ ತಂದು, ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಕೊಲೆ ರಹಸ್ಯ ಬಯಲಾಯಿತು.
ವಿಚಾರಣೆ ವೇಳೆ ಮಂಗಳಾ ಎಲ್ಲವನ್ನೂ ಹೇಳಿದ್ದಾಳೆ. ಮೂರು ಮೂರು ಸಂಸಾರದ ವಿಚಾರವಾಗಿ ಮಂಗಳಾ ಹಾಗೂ ದೀಪಕ್ ನಡುವೆ ಗಲಾಟೆ ನಡೆಯುತ್ತಿತ್ತಂತೆ. ಇದೇ ವಿಚಾರಕ್ಕೆ ಗಲಾಟೆ ತಾರಕಕ್ಕೇರಿದೆ. ಆಗ ತನ್ನ ಪರಿಚಿತ ಗಣೇಶ್ ಎಂಬಾತನ್ನು ಮಂಗಳಾ ಸ್ಥಳಕ್ಕೆ ಕರೆಸಿಕೊಂಡಿದ್ದಾಳೆ. ಈ ವೇಳೆ ಗಣೇಶ್ ಸಹಾಯದಿಂದ ದೀಪಕ್ಗೆ ಮಂಗಳಾ ಥಳಿಸಿದ್ದಾಳೆ. ಆತನ ತಲೆಗೆ ಇಟ್ಟಿಗೆಯಿಂದ ಹೊಡೆದು ಹತ್ಯೆಗೈದಿದ್ದಾಳೆ. ಆತ ಸಾವನ್ನಪ್ಪುತ್ತಿದ್ದಂತೆ ಭಯಕ್ಕೆ ಚಪ್ಪಲಿಯನ್ನೂ ಹಾಕಿಕೊಳ್ಳದೇ ಓಡಿದ್ದಾಳೆ. ಅದೇ ಚಪ್ಪಲಿಯಿಂದಾಗಿಯೇ ಮಂಗಳಾ ಜೈಲು ಸೇರಿದ್ದಾಳೆ. ಅವಳಿಗೆ ಸಾಥ್ ನೀಡಿದ್ದ ಗಣೇಶ್ನನ್ನು ಪೊಲೀಸರು ಹುಡುಕುತ್ತಾ ಇದ್ದಾರೆ.