ಮಧ್ಯಪ್ರದೇಶ : ಕೆಲವೊಮ್ಮೆ ಯಾರೋ ಮಾಡುವ ತಪ್ಪಿನಿಂದಾಗಿ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಮಧ್ಯಪ್ರದೇಶದ ಅಲಿರಾಜ್ಪುರ್ ಜಿಲ್ಲೆಯಲ್ಲಿ ನಡೆದ ಘಟನೆಯೇ ಕಾರಣ.
ನಿದ್ದೆ ಮಂಪರಿನಲ್ಲಿದ್ದ ಚಾಲಕನ ಅಚಾತುರ್ಯದಿಂದಾಗಿ ಬಸ್ ಮೆಲ್ಖೋದ್ರಾ ನದಿಗೆ ಉರುಳಿ ಬಿದ್ದಿದೆ. ಇದರ ಪರಿಣಾಮ ಬಸ್ನಲ್ಲಿ ಪ್ರಯಾಣಿಸುತ್ತಿದ್ದ 28 ಮಂದಿ ಗಾಯಗೊಂಡಿದ್ದು, ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಕೈಲಾಶ್ ಮೇದಾ (48), ಮೀರಾಬಾಯಿ (46) ಎಂದು ಗುರುತಿಸಲಾಗಿದೆ. ಮೃತಪಟ್ಟ ಮಗುವಿನ ಹೆಸರು ತಿಳಿದುಬಂದಿಲ್ಲ. ಮೃತ ದುರ್ದೈವಿಗಳು ಗುಜರಾತ್ ನಿವಾಸಿಗಳಾಗಿದ್ದಾರೆ.
ಇನ್ನು, ಗಾಯಗೊಂಡ 28 ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಾಲಕ ನಿದ್ರೆಗೆ ಜಾರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಮನೋಜ್ ಪುಷ್ಪ್ ತಿಳಿದ್ದಾರೆ.