ಕಾಸರಗೋಡು: ಎಟಿಎಂ ಮಿಷಿನ್ ಗೆ ಹಣ ತುಂಬಿಸಲೆಂದು ಬಂದಿದ್ದ ವಾಹನದಿಂದಲೇ ಹಾಡಹಗಲೇ 50 ಲಕ್ಷ ಹಣವನ್ನು ಖತರ್ನಾಕ್ ಖದೀಮರು ದರೋಡೆಗೈದ ಘಟನೆ ಉಪ್ಪಳ ಪೇಟೆಯಲ್ಲಿ ನಡೆದಿದೆ.
ದರೋಡೆಕೋರರು ವಾಹನದ ಗಾಜನ್ನು ಪುಡಿಗೈದು ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ. ವಾಹನದಲ್ಲಿದ್ದ ನೌಕರರು ವಾಹನವನ್ನು ನಿಲ್ಲಿಸಿ ಎಟಿಎಂ ಮೆಷಿನ್ ತೆರೆದು ವಾಹನದಲ್ಲಿದ್ದ ಹಣದ ಬಾಕ್ಸ್ ತೆಗೆದುಕೊಂಡು ಹೋಗಲು ಮರಳಿ ಬಂದ ವೇಳೆ ವಾಹನದ ಗಾಜು ಪುಡಿಯಾಗಿತ್ತು. ಪರಿಶೀಲಿಸಿದಾಗ 50 ಲಕ್ಷ ರೂ. ಇದ್ದ ಬಾಕ್ಸ್ ನಾಪತ್ತೆಯಾಗಿದೆ. ಖಾಸಗಿ ಏಜೆನ್ಸಿಯ ವಾಹನದಲ್ಲಿ ಹಣವನ್ನು ತಂದು ಎಟಿಎಂ ತುಂಬಿಸಲಾಗುತ್ತಿತ್ತು. ವಾಹನದ ಗಾಜನ್ನು ಒಡೆದು ಕೃತ್ಯ ನಡೆಸಲಾಗಿದೆ.
ಮಂಜೇಶ್ವರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದು, ವಾಹನದ ಚಾಲಕ ಮತ್ತು ನೌಕರನನ್ನು ವಶಕ್ಕೆ ತೆಗೆದುಕೊಂಡಿ ವಿಚಾರಣೆ ನಡೆಸುತ್ತಿದ್ದಾರೆ. ಸಮೀಪದ ಸಿಸಿಕ್ಯಾಮರಾ ಮೂಲಕ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.