ಬೆಂಗಳೂರು : ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಲೆಯಲ್ಲಿ ಭಗವದ್ಗೀತೆ ಹೇಳಿಕೊಟ್ಟರೆ ಅದಕ್ಕೆ ನಮ್ಮ ವಿರೋಧವೇನೂ ಇಲ್ಲ. ಸಂವಿಧಾನದಲ್ಲಿ ನಂಬಿಕೆ ಇಡಬೇಕು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು ಎಂಬುದು ನಮ್ಮ ಒತ್ತಾಯ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಶಾಲೆಯಲ್ಲಿ ಭಗವದ್ಗೀತೆಯನ್ನಾದರೂ ಹೇಳಿಕೊಡಲಿ, ಕುರಾನ್, ಬೈಬಲ್ ನ್ನಾದರೂ ಹೇಳಿಕೊಡಲಿ, ಅದಕ್ಕೆ ನಮ್ಮ ತಕರಾರಿಲ್ಲ. ನೈತಿಕ ಶಿಕ್ಷಣದ ಅಗತ್ಯವಿದೆ ಹಾಗಂತ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದಲ್ಲ. ಭಗವದ್ಗೀತೆ, ಕುರಾನ್ ಯಾವುದಕ್ಕು ನಮ್ಮ ವಿರೋಧವಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಬೇಕಾದ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡಲಿ ಎಂಬುದು ನಮ್ಮ ಆಗ್ರಹ ಎಂದರು.
ಇದು ಬಹುಸಂಸ್ಕೃತಿ ಇರುವ ರಾಷ್ಟ್ರ. ನಾವೆಲ್ಲರೂ ಒಟ್ಟಿಗೆ ಸಾಗಬೇಕು. ಆ ನಿಟ್ಟಿನಲ್ಲಿ ಸಂವಿಧಾನದ ಸಹಿಷ್ಣತೆ, ಸಹಬಾಳ್ವೆಯಲ್ಲಿ ನಂಬಿಕೆಯನ್ನಿಟ್ಟುಕೊಂಡಿರಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಸಾಗಬೇಕು ಎಂದು ಹೇಳಿದರು.