ಶಿಮ್ಲಾ: ಕುಂಭದ್ರೋಣ ಮಳೆಯಿಂದಾಗಿ ಕಳೆದ ಮೂರು ದಿನಗಳಲ್ಲಿ 8,000 ಕ್ಕೂ ಹೆಚ್ಚು ಜನರು ಕುಲು-ಮನಾಲಿ ಪ್ರದೇಶವನ್ನು ತೊರೆದಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಇಸ್ರೇಲಿಗರು ಅತಿ ಸುಂದರ ಪ್ರವಾಸಿ ಧಾಮ ಮಣಿಕರಣ್ನಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ತಾವು ಬಂದಿರುವ ವಾಹನದೊಂದಿಗೆ ಮರಳುವುದಾಗಿ ಪಟ್ಟುಹಿಡಿದಿರುವ ಕಾರಣ ಗೊಂದಲ ಸೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ಹಂಗಾಮಿ ಪೊಲೀಸ್ ಮಹಾನಿರ್ದೇಶಕ ಸತ್ವಂತ್ ಅತ್ವಾಲ್, ಮಣಿಕರಣ್ ನಿಂದ ಹಿಂದಿರುಗುವಂತೆ ಮನವಿ ಮಾಡಿದ್ದಾರೆ.
ವಿಪತ್ತು ಪೀಡಿತ ಪ್ರದೇಶಗಳಿಂದ ತಮ್ಮ ವಾಹನಗಳನ್ನು ಬಿಟ್ಟು ತಕ್ಷಣ ತೆರಳುವಂತೆ ಮುಖ್ಯಮಂತ್ರಿ ಗುರುವಾರ ಮನವಿ ಮಾಡಿದ್ದಾರೆ. ಅಲ್ಲದೆ ರಾಜ್ಯಾದ್ಯಂತ ವಿಪತ್ತು ಪೀಡಿತ ಪ್ರದೇಶಗಳಿಂದ 60,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.
ಅತಿ ಹೆಚ್ಚು ಪ್ರವಾಹ ಪೀಡಿತ ಕುಲು ಮತ್ತು ಲಹೌಲ್ ಸ್ಪಿತಿ ಜಿಲ್ಲೆಗಳಲ್ಲಿ ರಸ್ತೆ ಮತ್ತು ಸಂಪರ್ಕ ಜಾಲಗಳ ಮರುಸ್ಥಾಪನೆ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.
ಕಸೋಲ್ ಮತ್ತು ತೀರ್ಥನ್ ಕಣಿವೆಯಲ್ಲಿ ಸಿಲುಕಿರುವ 10 ಸಾವಿರ ಮಂದಿಯನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಆದರೆ ಪ್ರವಾಸಿಗರು ವಾಹನಗಳನ್ನು ಬಿಟ್ಟು ಬರಲು ಹಿಂಜರಿಯುತ್ತಿದ್ದಾರೆ ಎಂದು ವಿವರಿಸಿದ್ದಾರೆ.