ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಮರನಾಥ ಯಾತ್ರೆಯನ್ನು ಮೂರನೇ ದಿನವೂ ಸ್ಥಗಿತಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಜಮ್ಮು-ಶ್ರೀನಗರ ಹೆದ್ದಾರಿಯ ಪಂಥ್ಯಾಲ್ ಸುರಂಗದ ಬಳಿ ರಸ್ತೆಯ ಒಂದು ಭಾಗ ಕುಸಿದಿದ್ದು, ಹೆದ್ದಾರಿಯನ್ನು ಮುಚ್ಚಲಾಗಿದೆ. ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಕಣಿವೆಯ ಕಡೆಗೆ ಹೋಗಲು ಯಾವುದೇ ಯಾತ್ರಿಗಳಿಗೆ ಅವಕಾಶವಿರಲಿಲ್ಲ.
ದಕ್ಷಿಣ ಕಾಶ್ಮೀರ ಪಹಲ್ಗಾಮ್ ಮತ್ತು ಉತ್ತರ ಕಾಶ್ಮೀರದ ಬಾಲ್ಟಾಲ್ ಯಾತ್ರಾ ಮಾರ್ಗಗಳಲ್ಲಿ ಶನಿವಾರದಿಂದ ಭಾರಿ ಮಳೆ ಮುಂದುವರೆದಿದೆ. ಇಂದು ಬೆಳಿಗ್ಗೆ ಎರಡು ಬೇಸ್ ಕ್ಯಾಂಪ್ ಗಳಿಂದ ದೇವಾಲಯದ ಕಡೆಗೆ ಹೋಗಲು ಯಾವುದೇ ಯಾತ್ರಿಗಳಿಗೆ ಅವಕಾಶವಿರಲಿಲ್ಲ.
“ಹವಾಮಾನವು ಸುಧಾರಿಸಲು ಪ್ರಾರಂಭಿಸಿದ್ದರಿಂದ, ಪರಿಸ್ಥಿತಿಯನ್ನು ಇಂದು ಪರಿಶೀಲಿಸಲಾಗುವುದು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿಯವರೆಗೆ, 87,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಯಾತ್ರೆ ಮಾಡಿದ್ದಾರೆ.
ಈ ವರ್ಷದ 62 ದಿನಗಳ ಅಮರನಾಥ ಯಾತ್ರೆ ಜುಲೈ 1 ರಂದು ಪ್ರಾರಂಭವಾಗಿದ್ದು, ಶ್ರಾವಣ ಪೂರ್ಣಿಮಾ ಹಬ್ಬದಂದು ಆಗಸ್ಟ್ 31 ರಂದು ಕೊನೆಗೊಳ್ಳಲಿದೆ.