ಕಾಶ್ಮೀರದ ಜನರಿಗೆ ಅಲ್ಲಿನ ಪ್ರತ್ಯೇಕತಾವಾದಿಗಳು ಆಡುತ್ತಿರುವ ಆಟ ಅರ್ಥ ಮಾಡಿಕೊಂಡಿದ್ದಾರೆ ಎಂದು ಭಾರತೀಯ ಸೇನೆ ಲೆಫ್ಟಿನೆಂಟ್ ಜನರಲ್ ಡಿಪಿ ಪಾಂಡೆ ಹೇಳಿದ್ದಾರೆ.
ಸೇನೆಯ 15 ಕಾರ್ಪ್ಸ್ನ ಜನರಲ್ ಕಮಾಂಡಿಂಗ್ ಅಧಿಕಾರಿಯಾಗಿರುವ ಡಿಪಿ ಪಾಂಡೆ ಇಂದು ಜಮ್ಮು-ಕಾಶ್ಮೀರದ ಬೋನಿಯಾರ್ ಎಂಬಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಕಾಶ್ಮೀರದ ಜನರಿಗೆ ಇಲ್ಲಿನ ಪ್ರತ್ಯೇಕತಾವಾದಿಗಳ ಆಟ ಅರ್ಥವಾಗಿದೆ. ಹೀಗಾಗಿ ಎಲ್ಲ ಚಿಂತೆ ಬಿಟ್ಟು ಅವರೂ ಸಂತೋಷವಾಗಿದ್ದಾರೆ.
ಅವರ ಮನಸು ಹಾಳುಮಾಡಲು ಈಗ ಯಾವ ಪ್ರತ್ಯೇಕತಾವಾದಿಗಳೂ ಇಲ್ಲ. ಈಗೀಗ ಕಾಶ್ಮೀರದ ಪರಿಸ್ಥಿತಿಯೂ ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ.
ಗಡಿ ನಿಯಂತ್ರಣಾ ರೇಖೆ (ಎಲ್ಒಸಿ) ಬಳಿ ಪರಿಸ್ಥಿತಿ ಈಗ ಉತ್ತಮವಾಗಿದೆ. ಅಲ್ಲಿ ಸಾಕಷ್ಟು ಸೈನಿಕರನ್ನು ನಿಯೋಜನೆ ಮಾಡಿ, ಉಗ್ರರ ನುಸುಳುವಿಕೆಯನ್ನು ನಿಯಂತ್ರಿಸಲಾಗಿದೆ. ಎಂತಹ ಪರಿಸ್ಥಿತಿ ಬಂದರೂ ನಾವು ಎದುರಿಸಲು ಸಜ್ಜಾಗಿರುತ್ತೇವೆ. ಕಾಶ್ಮೀರದ ಜನರು ಎಲ್ಒಸಿ ಬಳಿ ಏನಾಗಬಹುದು ಎಂಬ ಚಿಂತೆಯನ್ನು ಬಿಟ್ಟುಬಿಡಬೇಕು ಎಂದು ಹೇಳಿದರು.
ಸಣ್ಣಪುಟ್ಟ ದಾಳಿ, ಅವಘಡಗಳು ನಡೆಯುತ್ತಲೇ ಇರುತ್ತವೆ. ಆದರೆ ಕಾಶ್ಮೀರದ ಒಟ್ಟಾರೆ ಪರಿಸ್ಥಿತಿ ಈಗ ಸುಧಾರಿಸಿದೆ. ಇಲ್ಲಿ ಪ್ರವಾಸೋದ್ಯಮವೂ ಅತ್ಯುತ್ತಮವಾಗಿ ಸುಧಾರಿಸಿದೆ ಎಂದರು.