ಮಾಲೆ: ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಮತ್ತೆ ಭಾರತದ ವಿರುದ್ಧ ತಮ್ಮ ವರಸೆ ತೋರಿಸಿದ್ದಾರೆ. ಭಾರತೀಯ ಸೇನಾ ಪಡೆಗೆ ನಮ್ಮ ನೆಲದಲ್ಲಿ ಜಾಗವಿಲ್ಲ ಎಂದಿರುವ ಮುಯಿಜ್ಜು ಅವರು ಮೇ 10ರ ಡೆಡ್ಲೈನ್ ಕೊಟ್ಟಿದ್ದರು. ಇದೀಗ ಈ ಗಡುವಿನ ಜೊತೆಗೆ ಯೋಧರು ಸೈನಿಕ ಸಮವಸ್ತ್ರದಲ್ಲಾಗಲಿ ಅಥವಾ ನಾಗರಿಕ ವಸ್ತ್ರದಲ್ಲಾಗಲಿ ಮಾಲ್ಡೀವ್ಸ್ನಲ್ಲಿ ಉಳಿಯುವುದಕ್ಕೆ ಅವಕಾಶವಿಲ್ಲ ಎಂದಿದ್ದಾರೆ.
ಭಾರತ ವಿರೋಧಿ ನಿಲುವನ್ನು ಪ್ರದರ್ಶಿಸುತ್ತಿರುವ ಮೊಹಮ್ಮದ್ ಮುಯಿಜ್ಜು ಅವರು ದೇಶ ಬಿಟ್ಟು ಹೋಗಲು ಭಾರತೀಯ ಸೇನಾ ಪಡೆಗೆ ಮೇ 10 ಕೊನೆಯ ದಿನವಾಗಿದೆ. ಆ ಬಳಿಕ ಭಾರತದ ಯಾವೊಬ್ಬ ಸೇನಾ ಸಿಬ್ಬಂದಿಯನ್ನು ಯಾವುದೇ ಸ್ವರೂಪದಲ್ಲಿ ಇಲ್ಲಿ ನೆಲೆಸಲು ಬಿಡುವುದಿಲ್ಲ ಎಂದು ಪಣ ತೊಟ್ಟಿದ್ದಾರೆ.
ಬಾ ಅಟಾಲ್ ಇಧಫುಶಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಭಾರತದ ಸೇನೆಯನ್ನು ದೇಶದಿಂದ ಹೊರ ಹಾಕುವಲ್ಲಿ ಯಶಸ್ವಿಯಾಗಿದೆ. ಕೆಲವರು ಇದರ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದು, ಪರಿಸ್ಥಿತಿಯನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಿಲ್ಲ ಎಂದಿದ್ದಾರೆ. ಸದ್ಯ ಮಾಲ್ಡೀವ್ಸ್ನಲ್ಲಿ 100 ಭಾರತೀಯ ಸೈನಿಕರು ಇದ್ದಾರೆ.