ಅಹಮದಾಬಾದ್: ಗುಜರಾತ್ನ ಅಹಮದಾಬಾದ್ನಲ್ಲಿ, ಹೆಂಡತಿ, ಗಂಡನನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾಳೆ. ಆತ ಮಗನನ್ನ ಹಿಗ್ಗಾಮುಗ್ಗ ಹೊಡೆಯುತ್ತಿದ್ದ. ಮಗ ಎಷ್ಟು ಬೇಡ ಅಂದರೂ ಅಪ್ಪ ಮಾತ್ರ ಒಂದೇ ಸಮನೆ ಹೊಡೆಯುತ್ತಲೇ ಇದ್ದ. ಕೊನೆಗೆ ತಾಳ್ಮೆ ಕಳೆದುಕೊಂಡ ತಾಯಿ ಮಗನನ್ನ ರಕ್ಷಿಸೋಕೆ ಮುಂದಾಗುತ್ತಾಳೆ. ಮಗನ ಸಂಕಟ ನೋಡಲಾಗದ ಆ ತಾಯಿ ಕೊನೆಗೆ ಗಂಡನಿಗೆನೇ ಚಾಕು ಚುಚ್ಚಿ ಕೊಲೆ ಮಾಡುತ್ತಾಳೆ.
ವಿಜಯ್ ಯಾದವ್ ಮತ್ತು ದೀಪ್ ಮಾಲಾ ಇವರಿಗೆ ಮೂವರು ಮಕ್ಕಳು. ವಿಜಯ್ ಯಾದವ್ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್ನ ಬಸ್ ಸರ್ವಿಸ್ ಕಂಡೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಳೆದ 15ದಿನಗಳ ಹಿಂದೆ ಆತ ಕೆಲಸವನ್ನ ಕಳೆದುಕೊಂಡಿದ್ದ. ಆದ ಕಾರಣ ಕೆಲಸವೇ ಇಲ್ಲದೇ ಇಡೀ ದಿನ ಮನೆಯಲ್ಲೇ ಇರುತ್ತಿದ್ದ. ಎಂದಿನಂತೆ ಆತ ಬೆಳಿಗ್ಗೆ ಎದ್ದು ಟಿವಿ ಆನ್ ಮಾಡಿದ್ದಾನೆ. ಆದರೆ ಟಿವಿ ಕೆಟ್ಟು ಹೋಗಿದ್ದರಿಂದ ಟಿವಿಯಲ್ಲಿ ಯಾವುದೇ ಚಾನೆಲ್ಗಳು ಬರ್ತಿರಲಿಲ್ಲ. ಆಗ ವಿಜಯ್ ಯಾದವ್ಗೆ ಇದು ಹೆಂಡತಿ ಮತ್ತು ಮಗ ಮಂಜಿತ್ ಮಾಡಿರುವ ಕಿತಾಪತಿ ಅಂತ ಅನಿಸಿದೆ. ಇದೇ ಕಾರಣಕ್ಕೆ ಸಿಟ್ಟಿನಿಂದ ಮಗನನ್ನ ಕರೆದು ಹಿಗ್ಗಾಮುಗ್ಗ ಹೊಡೆದಿದ್ದಾನೆ.
ಅಪ್ಪ ಹೊಡೆಯುತ್ತಿರುವ ಹೊಡೆತವನ್ನ ತಾಳದೇ ಒದ್ದಾಡುತ್ತಿದ್ದ ಮಗನ ರಕ್ಷಣೆಗೆ ತಾಯಿ ದೀಪ್ ಮಾಲಾ ಓಡಿ ಬಂದಿದ್ದಾಳೆ. ಗಂಡ ಹೆಂಡತಿಯ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಕೈಗೆ ಸಿಕ್ಕ ಚಾಕುವನ್ನ ತೆಗೆದುಕೊಂಡು ಗಂಡನ ಎದೆಗೆ ಚುಚ್ಚಿದ್ದಾಳೆ. ಆ ತಕ್ಷಣವೇ ಮೈದುನನನ್ನ ಕರೆದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟು ಹೊತ್ತಿಗೆ ವಿಜಯ್ ಯಾದವ್ ಸತ್ತು ಹೋಗಿದ್ದ.
ಈಗ ಅಹಮದಾಬಾದ್ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ. ಹತ್ಯೆಯಲ್ಲಿ ಬಳಸಲಾಗಿರುವ ಚಾಕುವನ್ನ ವಶಪಡಿಸಿಕೊಂಡಿದ್ದಾರೆ. ಅಹಮದಾಬಾದ್ನ ಸೋಲಾ ಹೈಕೋರ್ಟ್ ಪೊಲೀಸ್ ಸ್ಟೆಷನ್ನ ಇನ್ಸ್ಪೆಕ್ಟರ್ ವಾಧೇಲಾ ಅವರು ಹೇಳುವ ಪ್ರಕಾರ, ಕುಟುಂಬದಲ್ಲಿ ನಡೆದ ಕಲಹವೇ ಈ ಕೊಲೆಗೆ ಕಾರಣ ಅಂತ ಹೇಳಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮಾಡಲಾಗುತ್ತಿದ್ದು, ಆರೋಪಿಯನ್ನ ಬಂಧಿಸಲಾಗಿದೆ.