ನವದೆಹಲಿ: ಜಿ.20 ಶೃಂಗಸಭೆ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದಿತ್ತು. ಜಗತ್ತಿನ ಹಲವು ದೇಶಗಳ ನಾಯಕರು ಈ ಶೃಂಗದಲ್ಲಿ ಪಾಲ್ಗೊಂಡಿದ್ದರು. ಈ ನಿಟ್ಟಿನಲ್ಲಿ 2,700 ಕೋಟಿ ರೂ. ವೆಚ್ಚದಲ್ಲಿ ಭಾರತ್ ಮಂಟಪ್ ವೇದಿಕೆಯನ್ನು ನಿರ್ಮಿಸಿ ಮುಂಭಾಗದಲ್ಲಿ ನಟರಾಜ ವಿಗ್ರಹವನ್ನು ಇರಿಸಲಾಗಿತ್ತು.
ಇದೇ ಸ್ಥಳದಲ್ಲಿ ಪ್ರಧಾನಿ ಮೋದಿ ಜಿ.20ಗೆ ಆಗಮಿಸಿದ್ದ ವಿಶ್ವನಾಯಕರನ್ನು ಸ್ವಾಗತಿಸಿದ್ದರು. ಈ ನಡುವೆ ದೆಹಲಿಯಲ್ಲಿ ಭಾರಿ ಮಳೆಯಾಗುತ್ತಿದ್ದು ಭಾರತ್ ಮಂಟಪದ ಜಲಾವೃತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ಭಾರತ ಮಂಟಪ ಜಲಾವೃತದ ದೃಶ್ಯವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ಮೂಲಕ ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದೆ.
ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳುವ ಮೂಲಕ ಪ್ರಗತಿಯ ಪೊಳ್ಳು ಭರವಸೆಗಳು ಸ್ಪಷ್ಟವಾಗಿವೆ. ರೂ. 2,700 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ವೇದಿಕೆ ಕೇವಲ ಒಂದು ದಿನದ ಮಳೆಗೆ ಜಲಾವೃತವಾಗಿದೆ ಎಂದು ಟೀಕಿಸಿದ್ದಾರೆ. ಯುವ ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಬಿವಿ, ಕೇಂದ್ರದ ಭರವಸೆಗಳನ್ನು ಉಲ್ಲೇಖಿಸಿ ಅಭಿವೃದ್ಧಿ ಈಜುತ್ತಿದೆ ಎಂದು ಕೇಂದ್ರದ ವಿರುದ್ಧ ಟೀಕೆ ಮಾಡಿದ್ದಾರೆ.