ಬೆಂಗಳೂರು: ಮಳೆಯಿಲ್ಲದೇ ಜನತೆ ಕುಡಿಯುವ ನೀರು, ಕೃಷಿ ಚಟುವಟಿಕೆಗೆ ಹಿನ್ನಡೆಯಿಂದ ತತ್ತರಿಸುತ್ತಿದ್ದಾರೆ. ಇದರ ಮಧ್ಯೆ ಈಗ ಡೆಂಘೀಜ್ವರ ಕಾಟ ಶುರುವಾಗುತ್ತಿದೆ. ಮನೆ, ಹೋಟೆಲ್ ಇನ್ನಿತರ ಕಡೆಗಳಲ್ಲಿ ಹೆಚ್ಚು ದಿನಗಳ ಕಾಲ ನೀರು ಸಂಗ್ರಹಿಸುತ್ತಾರೆ. ಹೀಗಿರುವಾಗ ಜಿಲ್ಲೆಯಲ್ಲಿ ವಿವಿಧೆಡೆ ಡೆಂಘೀ ಪ್ರಕರಣಗಳು ಕಂಡುಬರುತ್ತಿವೆ.
ರಾಜ್ಯದಲ್ಲಿ ದಿನೇ ದಿನೇ ಡೆಂಘೀ ಕೇಸ್ ಹೆಚ್ಚಾಗುತ್ತಿದೆ. ತಿಂಗಳಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ಬೆಂಗಳೂರಲ್ಲೇ ಅತಿಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಲ್ಲಿಯವರೆಗೆ ಡೆಂಘೀ ಜ್ವರದಿಂದ 8,563 ಜನರು ಬಳಲುತ್ತಿದ್ದಾರೆ. 90 ಸಾವಿರಕ್ಕೂ ಅಧಿಕ ಡೆಂಘೀ ಶಂಕಿತರ ರಕ್ತ ತಪಾಸಣೆ ಮಾಡಲಾಗಿದೆ.
ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಬೆಂಗಳೂರು- 4,979., ಮೈಸೂರು- 430., ಉಡುಪಿ- 346., ಶಿವಮೊಗ್ಗ- 198., ದಕ್ಷಿಣ ಕನ್ನಡ- 178., ಕಲಬುರಗಿ- 176., ವಿಜಯಪುರ- 170., ಚಿತ್ರದುರ್ಗ- 158., ಬೆಳಗಾವಿ- 149., ಹಾಸನ- 139., ದಾವಣಗೆರೆ- 134., ಚಿಕ್ಕಮಗಳೂರು- 128., ತುಮಕೂರು- 122., ಧಾರವಾಡ- 115 ಮತ್ತು ಕೊಡಗು- 110 ಪ್ರಕರಣಗಳು ದಾಖಲಾಗಿವೆ.
ರೋಗ ಲಕ್ಷಣಗಳೇನು?
ವ್ಯಕ್ತಿಯಲ್ಲಿ ಡೆಂಘೀಜ್ವರ ಕಾಣಿಸಿಕೊಂಡರೆ ಸುಲಭವಾಗಿ ಗುಣವಾಗುತ್ತದೆ. ಒಮ್ಮೆ ಡೆಂಘೀಜ್ವರ ಬಂದವರಿಗೆ ಮತ್ತೊಮ್ಮೆ ಡೆಂಘೀ ವೈರಾಣು ಸೋಂಕು ತಗುಲಿದರೆ ಪರಿಣಾಮ ಗಂಭೀರವಾಗುತ್ತದೆ. ದಿಢೀರ್ ಜ್ವರ, ತಲೆನೋವು, ಮೂಗಿನಲ್ಲಿ ಸೋರುವಿಕೆ, ಗಂಟಲು ನೋವು, ವಾಂತಿ, ಹೊಟ್ಟೆನೋವು, ತೋಳು, ಮೈ-ಕೈ ನೋವು, ಅತಿಸಾರ ಈ ರೀತಿ ಹಲವು ಗಂಭೀರ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅನಂತರ ದೇಹದ ಮೇಲೆ ಕೆಂಪು ದದ್ದು ಹಾಗೂ ಕರುಳಿನಲ್ಲಿ ರಕ್ತಸ್ರಾವ ಆಗುತ್ತದೆ ಎನ್ನುವುದು ಆರೋಗ್ಯ ಇಲಾಖೆ ಅಧಿಕಾರಿಗಳ ಮಾಹಿತಿ.
ಡೆಂಘೀ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಚಿಕಿತ್ಸೆ ಪಡೆಯದೇ ಇರುವುದು, ದೀರ್ಘಕಾಲ ಜ್ವರ ಇದ್ದರೂ ನಿರ್ಲಕ್ಷ್ಯ ಮಾಡುವುದರಿಂದ ರೋಗ ಉಲ್ಬಣಿಸುವ ಸಾಧ್ಯತೆ ಇದೆ. ಜನರು ಜಾಗ್ರತೆ ವಹಿಸಿ, ಸಕಾಲಕ್ಕೆ ಚಿಕಿತ್ಸೆ ಪಡೆಯಯಬೇಕು. ಇದರಿಂದ ರೋಗ ತಡೆಗಟ್ಟಬಹುದು ಎಂದು ಸಲಹೆ ನೀಡಿದ್ದಾರೆ.