ನವದೆಹಲಿ: ಇಡೀ ಈಶಾನ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಾಲ್ಕು ಪಟ್ಟು ವೇಗವಾಗಿ ನಡೆಯುತ್ತಿವೆ. ಅಭಿವೃದ್ಧಿ ಹೊಂದಿದ ರಾಜ್ಯದಿಂದ ಅಭಿವೃದ್ಧಿ ಹೊಂದಿದ ಭಾರತದ ಕಾರ್ಯಕ್ರಮಗಳು ದೇಶಾದ್ಯಂತ ವೇಗವಾಗಿ ಮುಂದುವರಿಯುತ್ತಿವೆ. ಇಂದು ಉತ್ತರದ ಎಲ್ಲಾ ರಾಜ್ಯಗಳೊಂದಿಗೆ ಒಟ್ಟಾಗಿ ಅಭಿವೃದ್ಧಿ ಯೋಜನೆಗಳಲ್ಲಿ ಭಾಗವಹಿಸುವ ಅವಕಾಶ ನನಗೆ ಸಿಕ್ಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಅರುಣಾಚಲ ಪ್ರದೇಶದಲ್ಲಿ ಸಿದ್ಧಗೊಂಡಿರುವ, ವಿಶ್ವದ ಅತಿ ಎತ್ತರದಲ್ಲಿ (13000 ಅಡಿ) ನಿರ್ಮಿಸಲಾಗಿರುವ ವಿಶ್ವದ ಅತಿ ಉದ್ದದ ಸೆಲಾ ದ್ವಿಪಥ ಸುರಂಗ ಮಾರ್ಗವನ್ನು ಲೋಕಾರ್ಪಣೆಗೊಳಿಸಿದ ನಂತರ ಅಲ್ಲಿದ್ದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ವ್ಯಾಪಾರ, ಪ್ರವಾಸೋದ್ಯಮ, ದಕ್ಷಿಣ ಮತ್ತು ಪೂರ್ವ ಏಷ್ಯಾದ ಇತರ ಸಂಬಂಧಗಳಲ್ಲಿ ನಮಗೆ ಈಶಾನ್ಯವು ಬಲವಾದ ಕೊಂಡಿಯಾಗಲಿದೆ ಎಂದರು.
ಈಶಾನ್ಯ ಭಾಗದ ಅಭಿವೃದ್ಧಿ ಕುರಿತ ನಮ್ಮ ದೃಷ್ಟಿಕೋನವನ್ನು ‘ಅಷ್ಟಲಕ್ಷ್ಮೀ’ ಎಂದು ಕರೆಯಲಾಗುತ್ತಿದೆ. ಇಂದು ಅರುಣಾಚಲದಲ್ಲಿ ಒಟ್ಟಾಗಿ 55 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಇಂದು ಅರುಣಾಚಲ ಪ್ರದೇಶದ 35 ಸಾವಿರ ಬಡ ಕುಟುಂಬಗಳು ತಮ್ಮ ಶಾಶ್ವತ ಮನೆಗಳನ್ನು ಪಡೆದಿವೆ. ಅರುಣಾಚಲ ಪ್ರದೇಶ ಮತ್ತು ತ್ರಿಪುರಾದಲ್ಲಿ ಸಾವಿರಾರು ಕುಟುಂಬಗಳು ನೀರಿನ ನಲ್ಲಿ ಸಂಪರ್ಕ ಪಡೆದಿವೆ ಎಂದು ಮೋದಿ ಹೇಳಿದರು.
ಇಂದು 55 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಪ್ರಾಜೆಕ್ಟ್ಗಳ ಉದ್ಘಾಟನೆ, ಶಂಕುಸ್ಥಾಪನೆ ನಡೆದಿದೆ. ಈಶಾನ್ಯ ಭಾಗದ ಅಭಿವೃದ್ಧಿಗೆ ಕಳೆದ 5 ವರ್ಷಗಳಲ್ಲಿ ಎಷ್ಟು ಬಂಡವಾಳ ಹೂಡಿದ್ದೇವೆಯೋ ಅಷ್ಟೇ ಹಣದಲ್ಲಿ ಇಷ್ಟು ಕೆಲಸ ಮಾಡಲು ಕಾಂಗ್ರೆಸ್ ಗೆ 20 ವರ್ಷ ಬೇಕಾಗಬಹುದು ಎಂದು ಪ್ರತಿಪಕ್ಷದ ವಿರುದ್ಧ ಕುಹಕವಾಡಿದರು.
ಮೋದಿ ಗ್ಯಾರಂಟಿ ಏನು ಎಂಬುದನ್ನು ಅರುಣಾಚಲಕ್ಕೆ ಬಂದರೆ ಸ್ಪಷ್ಟವಾಗಿ ನೋಡಬಹುದು. ಮೋದಿಯವರ ಗ್ಯಾರಂಟಿ ಹೇಗಿದೆ ಎಂಬುದನ್ನು ಇಡೀ ಈಶಾನ್ಯವೇ ನೋಡುತ್ತಿದೆ. ಸ್ವಾತಂತ್ರ್ಯ ಬಂದ ನಂತರ 2014ರವರೆಗೆ 10 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿತ್ತು. ಆದರೆ ಕಳೆದ 10 ವರ್ಷಗಳಲ್ಲಿ 6 ಸಾವಿರ ಕಿ.ಮೀ.ಗೂ ಹೆಚ್ಚು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಕಾಂಗ್ರೆಸ್ 7 ದಶಕಗಳಲ್ಲಿ ಮಾಡಿದ ಕೆಲಸವನ್ನು ನಾವು 1 ದಶಕದಲ್ಲಿ ಮಾಡಿದ್ದೇವೆ ಎಂದು ಮೋದಿ ಹೇಳಿದರು.