ನವದೆಹಲಿ: ಈಶಾನ್ಯ ರಾಜ್ಯಗಳ ಪ್ರತಿಯೊಂದು ಸಮಸ್ಯೆಗಳಿಗೂ ಕಾಂಗ್ರೆಸ್ ತಾಯಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲೋಕಸಭೆಯಲ್ಲಿ ವಿಪಕ್ಷಗಳ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು ಈಶಾನ್ಯ ರಾಜ್ಯಗಳ ಸಮಸ್ಯೆ ಜೀವಂತವಾಗಿರಿಸಿದ್ದು ಕಾಂಗ್ರೆಸ್ ಎಂದರು.
ಮಣಿಪುರದಲ್ಲಿ ಬಂಡಾಯ ಸಂಘಟನೆಗಳ ಅಪೇಕ್ಷೆಯಂತೆ ಎಲ್ಲವೂ ನಡೆಯುತ್ತಿದ್ದಾಗ ಮಣಿಪುರದಲ್ಲಿ ಯಾರ ಸರ್ಕಾರವಿತ್ತು? ಸರ್ಕಾರಿ ಕಚೇರಿಗಳಲ್ಲಿ ಮಹಾತ್ಮ ಗಾಂಧಿಯವರ ಚಿತ್ರಕ್ಕೆ ಅವಕಾಶ ನೀಡದಿದ್ದಾಗ ಮಣಿಪುರದಲ್ಲಿ ಯಾರ ಸರ್ಕಾರ ಇತ್ತು ಎಂದು ಪ್ರಶ್ನಿಸಿದರು.
ಈಶಾನ್ಯದವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಕಾಂಗ್ರೆಸ್ ಎಂದಿಗೂ ಪ್ರಯತ್ನಿಸಲಿಲ್ಲ. ನಾನು (ಈಶಾನ್ಯ) ರಾಜ್ಯಗಳಿಗೆ 50 ಬಾರಿ ಭೇಟಿ ನೀಡಿದ್ದೇನೆ. ಇದು ಕೇವಲ ದತ್ತಾಂಶವಲ್ಲ, ಇದು ಈಶಾನ್ಯದ ಕಡೆಗೆ ಸಮರ್ಪಣೆಯಾಗಿದೆ. 1956 ರ ಮಾರ್ಚ್ 5 ರಂದು, ಕಾಂಗ್ರೆಸ್ ಮಿಜೋರಾಂನ ಮುಗ್ಧ ಜನರ ಮೇಲೆ ವಾಯುಪಡೆಯ ಮೂಲಕ ದಾಳಿ ನಡೆಸಿತು. ಆ ನೋವನ್ನು ರಾಜ್ಯವು ಇನ್ನೂ ಮರೆಯಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.