ನವದೆಹಲಿ: ಸಂಸತ್ತಿನಲ್ಲಿ ಜವಾಹರಲಾಲ್ ನೆಹರು ಅವರ ಐತಿಹಾಸಿಕ ‘ಎ ಟ್ರೈಸ್ಟ್ ವಿತ್ ಡೆಸ್ಟಿನಿ’ ಭಾಷಣದ ಪ್ರತಿಧ್ವನಿಯು ದೇಶದ ರಾಜಕಾರಣಿಗಳಿಗೆ ಸ್ಫೂರ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಹಳೆಯ ಸಂಸತ್ ಭವನದ ಬಗ್ಗೆ ಮಾಡಿದ ವಿದಾಯದ ಭಾಷಣ ವೇಳೆ ಈ ಮೇಲಿನ ವಾಕ್ಯಗಳನ್ನು ನೆನಪಿಸಿಕೊಂಡರು.
ಆಗಸ್ಟ್ 15, 1947 ರಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ದೇಶದ ಮೊದಲ ಪ್ರಧಾನಿ ನೆಹರು, “ಮಧ್ಯರಾತ್ರಿಯ ಹೊತ್ತಿನಲ್ಲಿ ಜಗತ್ತು ನಿದ್ರಿಸುತ್ತಿರುವಾಗ ಭಾರತವು ಜೀವನ ಮತ್ತು ಸ್ವಾತಂತ್ರ್ಯಕ್ಕಾಗಿ ಎಚ್ಚರಗೊಂಡಿದೆ ಎಂದು ಹೇಳಿದ್ದರು. “ನೆಹರೂ ಜೀ ಅವರ ಮಿಡ್ನೈಟ್ ಭಾಷಣದ ಪ್ರತಿಧ್ವನಿಯು ನಮಗೆ ಸ್ಫೂರ್ತಿ ನೀಡುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರು ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ, ಆದರೆ ಈ ದೇಶ ಉಳಿಯುತ್ತದೆ ಎಂದು ಹೇಳಿದ ಸದನವೂ ಇದೆ ಎಂದರು.
ಸಂಸತ್ತು ಇಂದು ಐದು ದಿನಗಳ ವಿಶೇಷ ಅಧಿವೇಶನಕ್ಕಾಗಿ ಸಭೆ ಸೇರಿದ್ದು, ಇಂದು ಹಳೆ ಸಂಸತ್ತಿನಲ್ಲಿ ಕೊನೆಯ ಅಧಿವೇಶನ ನಡೆಯಲಿದ್ದು, ನಾಳೆಯಿಂದ ಹೊಸ ಕಟ್ಟಡದಲ್ಲಿ ಅಧಿವೇಶನಗಳು ನಡೆಯಲಿದೆ.
ಮಾಜಿ ರಾಷ್ಟ್ರಪತಿಗಳು ಮತ್ತು ಮಾಜಿ ಪ್ರಧಾನಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಹಿಡಿದು ರಾಮನಾಥ್ ಕೋವಿಂದ್, ದ್ರೌಪದಿ ಮುರ್ಮುವರೆಗೆ ಈ ಸಂಸತ್ತು ರಾಷ್ಟ್ರಪತಿಗಳ ಸಮರ್ಥ ಮಾರ್ಗದರ್ಶನವನ್ನು ಪಡೆದಿದೆ. ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ ಅಟಲ್ ಬಿಹಾರಿಯವರ ಕಾಲಕ್ಕೂ ಈ ಸಂಸತ್ತು ಸಾಕ್ಷಿಯಾಗಿದೆ. ಈ ದೇಶಕ್ಕೆ ದಿಕ್ಕು ತೋರಿದ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರ ಆಡಳಿತದ ಹೆಮ್ಮೆಯಾಗಿ ಈ ಕಟ್ಟಡವಿದೆ ಎಂದರು.