ಮಂಗಳೂರು: ಬಿಜೆಪಿ ಟಿಕೆಟ್ ಗಾಗಿ ಡೀಲ್ ಪ್ರಕರಣದಲ್ಲಿ ಮತ್ತೊಬ್ಬ ಸ್ವಾಮೀಜಿ ಹೆಸರು ಕೇಳಿಬಂದಿದೆ. ಬೈಂದೂರು ಕ್ಷೇತ್ರದ ಟಿಕೆಟ್ ತೆಗೆಸಿಕೊಡುವುದಾಗಿ ಉದ್ಯಮಿಯನ್ನು ನಂಬಿಸಿ ವಂಚಿಸಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಬಂಧನವಾಗಿದೆ. ಅದೇ ರೀತಿ ಚೈತ್ರಾ ಕುಂದಾಪುರ ಐಟಿ ಇಲಾಖೆಗೆ ಬರೆದ ಪತ್ರದಲ್ಲಿ ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೆಸರು ಕೇಳಿಬಂದಿದೆ.
ಚೈತ್ರ ಕುಂದಾಪುರ ಬರೆದ ಪತ್ರದ ಬಗ್ಗೆ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿದ್ದಾರೆ. ನನಗೂ ಆಕೆಯ ಪ್ರಕರಣಕ್ಕೂ ಸಂಬಂಧ ಇಲ್ಲ. ಜುಲೈ ತಿಂಗಳಲ್ಲಿ ಹಿಂದು ಸಂಘಟನೆಯ ಸತ್ಯಜಿತ್ ಸುರತ್ಕಲ್ ಫೋನ್ ಮಾಡಿದ್ದರು. ಗೋವಿಂದ ಪೂಜಾರಿ ಟಿಕೆಟ್ ವಿಚಾರದ ಕುರಿತು ನನ್ನನ್ನು ಪ್ರಶ್ನೆ ಮಾಡಿದ್ದರು. ಆದರೆ ಆ ವಿಚಾರದ ಕುರಿತು ನನಗೇನೂ ತಿಳಿದಿರಲಿಲ್ಲ, ಹೀಗಾಗಿ ನನ್ನಲ್ಲಿ ಯಾಕೆ ವಿಷಯ ಪ್ರಶ್ನೆ ಮಾಡುವುದೆಂದು ಕೇಳಿದ್ದೆ. ಬಳಿಕ ಅವರೇ ಫೋನ್ ಮಾಡಿ, ಚೈತ್ರಾ ಮತ್ತು ಅಭಿನವ ಹಾಲಶ್ರೀ ಹೆಸರಿದೆ ಎಂದು ಹೇಳಿದ್ದರು. ನಂತರ ಚೈತ್ರಾ ಕುಂದಾಪುರ ಪರಿಚಯ ಇದ್ದ ಕಾರಣ ಆಕೆಗೆ ಫೋನ್ ಮಾಡಿ ಸ್ಪಷ್ಟನೆ ಕೇಳಿದ್ದೆ. ಮೂರು ಕೋಟಿ ದುಡ್ಡಿನ ಬಗ್ಗೆ ಕೇಳಿದಾಗ, ಒಂದೂವರೆ ಇದ್ದುದು ಮೂರು ಕೋಟಿ ಆಯ್ತಾ ?. ಇನ್ನು ಅದು 4-5 ಕೋಟಿ ಆಗಬಹುದು ಎಂದು ಆಕೆ ಹೇಳಿದ್ದಳು, ಸತ್ಯ ಹೇಳು ಎಂದಿದ್ದೆ. ಆಕೆ ತನಗೇನೂ ಗೊತ್ತಿಲ್ಲ ಎಂದಿದ್ದರು.
ಈ ನಿಟ್ಟಿನಲ್ಲಿ ಚಕ್ರವರ್ತಿ ಸೂಲಿಬೆಲೆ ಅವರಿಗೂ ಫೋನ್ ಮಾಡಿದ್ದೇನೆ. ಅಲ್ಲದೆ ಅಭಿನವ ಹಾಲಶ್ರೀ ಸ್ವಾಮೀಜಿ ಸೂಲಿಬೆಲೆ ಜೊತೆಗೆ ಗುರುತಿಸಿಕೊಂಡ ಕಾರಣ ಅವರಿಗೂ ವಿಷಯ ತಿಳಿಸಿದ್ದೆ. ಅಲ್ಲದೆ ನಾವು ವಿಶ್ವ ಹಿಂದು ಪರಿಷತ್ತಿನಲ್ಲಿ ಗುರುತಿಸಿಕೊಂಡ ಶರಣ್ ಪಂಪ್ವೆಲ್ ಅವರಿಗೂ ವಿಷಯ ತಿಳಿಸಿದ್ದೇನೆ. ಈ ವೇಳೆ ನಿಮಗೇನೂ ಸಂಪರ್ಕ ಇಲ್ಲವೆಂದಾದರೆ ನೀವ್ಯಾಕೆ ತಲೆ ಬಿಸಿ ಮಾಡ್ತೀರಿ ಎಂದು ಶರಣ್ ಹೇಳಿದ್ದರು. ಈಗ ನನ್ನ ಹೆಸರನ್ನು ಐಟಿ ಇಲಾಖೆಗೆ ಬರೆದ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ವಿಷಯ ಇಷ್ಟೇ ಆಗಿದ್ದರೂ, ನನ್ನ ಹೆಸರು ಬಂದಿರುವುದು ಬೇಸರವಾಗಿದೆ. ಹಣದ ವಿಚಾರದಲ್ಲಿ ತನಗೇನೂ ಗೊತ್ತಿಲ್ಲ, ಚೈತ್ರಾಳ ಪರಿಚಯ ಇರುವುದು ಹೌದು ಆದರೆ ಆಕೆಯೊಂದಿಗೆ ಬೇರೇನೂ ಸಂಪರ್ಕ, ಮಾತುಕತೆ, ವಹಿವಾಟು ಇಲ್ಲ ಎಂದು ವಜ್ರದೇಹಿ ಸ್ವಾಮೀಜಿ ಹೇಳಿದ್ದಾರೆ.