ನವದೆಹಲಿ: ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್ ಗಳನ್ನು ಹ್ಯಾಕ್ ಮಾಡಬಹುದು ಎಂದು ತಂತ್ರಜ್ಞಾನ ಕಂಪನಿ ಆಪಲ್ ಮಂಗಳವಾರ ಪ್ರತಿಪಕ್ಷಗಳ ಐವರು ಸಂಸದರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಅದನ್ನು ವಿರೋಧ ಪಕ್ಷಗಳು ಸಂಸದರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿಪಕ್ಷಗಳ ಐವರು ಸಂಸದರು ತಾವು ಆಪಲ್ನಿಂದ ಸ್ವೀಕರಿಸಿದ, ”ತಮ್ಮ ಐಫೋನ್ಗಳನ್ನು ಸರ್ಕಾರಿ ಪ್ರಾಯೋಜಿತ ದಾಳಿಕೋರರು ದೂರದಿಂದಲೇ ಹ್ಯಾಕ್ ಮಾಡಲು ಪ್ರಯತ್ನಿಸಬಹುದು ಎಂಬ ಎಚ್ಚರಿಕೆ ಸಂದೇಶವನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ.
ವರದಿಗಳ ಪ್ರಕಾರ, ಟಿಎಂಸಿಯ ಮಹುವಾ ಮೊಯಿತ್ರಾ, ಶಿವಸೇನೆಯ(ಯುಬಿಟಿ) ಪ್ರಿಯಾಂಕಾ ಚತುರ್ವೇದಿ ಮತ್ತು ಎಎಪಿಯ ರಾಘವ್ ಚಡ್ಡಾ, ಕಾಂಗ್ರೆಸ್ ನಾಯಕ ಶಾಹಿ ತರೂರ್ ಮತ್ತು ಎಐಎಂಐಎಂನ ಅಸಾದುದ್ದೀನ್ ಓವೈಸಿ ಅವರು ಆಪಲ್ನಿಂದ ಈ ರೀತಿಯ ಎಚ್ಚರಿಕೆ ಸಂದೇಶಗಳನ್ನು ಸ್ವೀಕರಿಸಿದ್ದಾರೆ ಮತ್ತು ಈ ಸಂಬಂಧ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಕೇವಲ ಭಾರತದಲ್ಲಿ ಮಾತ್ರವಲ್ಲ 150 ದೇಶಗಳಲ್ಲಿ ಇಂತಹ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದ್ದಾರೆ. ಇಂತಹ ಎಚ್ಚರಿಕೆ ಕೆಲವೊಮ್ಮೆ ಸುಳ್ಳು ಕೂಡ ಆಗಿರಬಹುದು. ಪ್ರತಿಪಕ್ಷಗಳ ನಾಯಕರ ಟೀಕೆ ಬಗ್ಗೆ ಉಲ್ಲೇಖಿಸಿ ದೇಶದ ಬೆಳವಣಿಗೆ ನೋಡಲು ಸಾಧ್ಯವಾಗದವರು ಇಂತಹ ಟೀಕೆ ಮಾಡುತ್ತಾರೆ ಎಂದು ಹೇಳಿದ್ದಾರೆ.
ಈ ಟೀಕಾಕಾರರು ವಿಧ್ವಂಸಕ ರಾಜಕೀಯ ಮಾಡುತ್ತಿದ್ದಾರೆ… ಅವರಿಗೆ ಯಾವುದೇ ಪ್ರಮುಖ ಸಮಸ್ಯೆ ಇಲ್ಲದಿದ್ದಾಗ, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಆಗುತ್ತಿರುವ ಪ್ರಗತಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಇಂತಹ ಕ್ಷುಲ್ಲಕ ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದರು.