ನವದೆಹಲಿ: ಭಾರತದಲ್ಲಿ ಕೊರೋನಾ ಹಾಗೂ ಓಮಿಕ್ರಾನ್ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆಂದು ತಿಳಿದುಬಂದಿದೆ.
ಕರ್ನಾಟಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳ ಸೂಚನೆಗಳಿಗೆ ರಾಜ್ಯ ಎದುರು ನೋಡುತ್ತಿದೆ.ರಾಜ್ಯದಲ್ಲಿ ಈಗಾಗಲೇ ವೀಕೆಂಡ್, ನೈಟ್ ಕರ್ಫ್ಯೂ ಸೇರಿದಂತೆ ಇತರೆ ಕಠಿಣ ನಿಯಮ ಜಾರಿಗೆ ತಂದರೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಲಾಕ್ಡೌನ್ ಮಾತುಗಳು ಕೇಳಿಬರುತ್ತಿವೆ.
ರಾಜ್ಯದಲ್ಲಿ ಫೆಬ್ರವರಿ ತಿಂಗಳಿನಲ್ಲಿ ಗರಿಷ್ಠ ಪ್ರಮಾಣಕ್ಕೆ ಸೋಂಕು ತಲುಪಲಿದ್ದು, ಕೊರೋನಾ 3ನೇ ಅಲೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ನಡೆಸುತ್ತಿರುವ ಈ ಸಭೆ ಮಹತ್ವವನ್ನು ಪಡೆದುಕೊಂಡಿದೆ.
ಇದರ ಮಧ್ಯೆ ಮುಖ್ಯಮಂತ್ರಿಗಳ ಜತೆ ಮೋದಿ ಸಭೆ ಮಾಡುತ್ತಿದ್ದು, ಲಾಕ್ಡೌನ್ ಹಾಗೂ ಕಠಿಣ ನಿಯಮಗಳ ಬಗ್ಗೆ ಬಗ್ಗೆ ಚರ್ಚೆಯಾಗಲಿದೆ. ಅಲ್ಲದೇ ಇನ್ನಷ್ಟು ಕಠಿಣ ಕ್ರಮಕೈಗೊಳ್ಳಿ ಎಂದು ಮೋದಿ ಸಲಹೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸಭೆ ಬಳಿಕ ಲಾಕ್ಡೌನ್ ಹೆಸರು ಹೇಳದೇ ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡುವ ಸಾಧ್ಯತೆಯಿದೆ. ಪ್ರಧಾನಿ ಮೋದಿ ಸಲಹೆ ಸೂಚನೆಗಳನ್ನ ಆಧರಿಸಿ, ಬಳಿಕ ತಜ್ಞರ ವರದಿಯನ್ನು ಪಡೆದುಕೊಂಡು ಸರ್ಕಾರ ಕಠಿಣ ಕ್ರಮಕೈಗೊಳ್ಳುವ ಸಾಧ್ಯತೆಗಳಿವೆ.