ನವದೆಹಲಿ : ಸಂಸತ್ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ನಿರಂತರವಾಗಿ ಗೈರು ಹಾಜರಾಗುತ್ತಿದ್ದ ಭಾರತೀಯ ಜನತಾ ಪಕ್ಷದ ಸಂಸದರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. “ನಿಮ್ಮನ್ನು ನೀವು ಬದಲಿಸಿಕೊಳ್ಳಿರಿ, ಇಲ್ಲದಿದ್ದರೆ ಅಲ್ಲಿಯೇ ಬದಲಾವಣೆಗಳನ್ನು ತರಲಾಗುವುದು,” ಎಂದು ಎಚ್ಚರಿಸಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ತಮ್ಮ ಪಕ್ಷದ ಸಂಸದರು ಮತ್ತು ಮಂತ್ರಿಗಳಿಗೆ ಶಿಸ್ತು, ಸಮಯಪ್ರಜ್ಞೆ ಮತ್ತು ಸರದಿಯಲ್ಲಿ ಮಾತನಾಡಬೇಡಿ ಎಂದು ಸಲಹೆ ನೀಡಿದ ಪ್ರಧಾನಿ ಮೋದಿ, ಮಕ್ಕಳಂತೆ” ವರ್ತಿಸುವ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದರು.
“ದಯವಿಟ್ಟು ಸಂಸತ್ ಮತ್ತು ಸಭೆಗಳಿಗೆ ನಿರಂತರವಾಗಿ ಹಾಜರಾಗಬೇಕು. ಸಣ್ಣ ಮಕ್ಕಳ ರೀತಿಯಲ್ಲಿ ಇದರ ಬಗ್ಗೆ ಪದೇ ಪದೆ ನಿಮ್ಮ ಮೇಲೆ ಒತ್ತಡ ಹೇರುವುದಕ್ಕೆ ನನಗೆ ಸರಿ ಎನ್ನಿಸುವುದಿಲ್ಲ. ನಿಮ್ಮನ್ನು ನೀವು ಬದಲಾಯಿಸಿಕೊಳ್ಳದಿದ್ದರೆ ಸೂಕ್ತ ಸಮಯದಲ್ಲಿ ಬದಲಾವಣೆಗಳನ್ನು ತರಲಾಗುತ್ತವೆ,” ಎಂದು ಹೇಳಿದರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಿರಿಯ ಸಚಿವರು ಹಾಜರಾಗಿದ್ದರು.