ಹೊಸದಿಲ್ಲಿ: 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಶಿಕ್ಷಕನಿಗೆ ಜಾಮೀನು ನೀಡಲು ದಿಲ್ಲಿ ಉಚ್ಚ ನ್ಯಾಯಾಲಯ ನಿರಾಕರಿಸಿದ್ದು, ‘ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದು ಹೇಳಿದೆ.
ಅಪ್ರಾಪ್ತ ಸಂತ್ರಸ್ತೆಗಿಂತ 22 ವರ್ಷ ದೊಡ್ಡವನಾದ ಆರೋಪಿ, ಶಿಕ್ಷಕನಾಗಿ ತನ್ನ ತನ್ನ ಸ್ಥಾನವನ್ನು ಮರೆತು ಬಾಲಕಿಯನ್ನು ಲೈಂಗಿಕವಾಗಿ ದುರುಪಯೋಗ ಪಡೆದುಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಜತೆಗೆ ಆರೋಪಿ, ಶಿಕ್ಷಕ-ವಿದ್ಯಾರ್ಥಿ ಸಂಬಂಧದ ಪಾವಿತ್ರ್ಯವನ್ನು ಕಡೆಗಣಿಸಿದ್ದಾನೆ ಎಂದು ನ್ಯಾಯಮೂರ್ತಿ ಸ್ವರಣ ಕಾಂತಾ ಶರ್ಮಾ ಹೇಳಿದರು.
ಆರೋಪಿ ಶಿಕ್ಷಕನ ವಕೀಲರು ಶಿಕ್ಷಣದಲ್ಲಿ ಅವರ ದೀರ್ಘಕಾಲದ ವೃತ್ತಿಜೀವನದ ಆಧಾರದ ಮೇಲೆ ಜಾಮೀನಿಗಾಗಿ ವಾದಿಸಿದಾಗ, ನ್ಯಾಯಾಲಯವು ಈ ವಾದವನ್ನು ತಿರಸ್ಕರಿಸಿತು, ಅವರ ನಡವಳಿಕೆಯು ಬೋಧನಾ ವೃತ್ತಿ ಮತ್ತು ವಿದ್ಯಾರ್ಥಿ-ಶಿಕ್ಷಕ ಸಂಬಂಧದ ಬಗ್ಗೆ ಅಗೌರವ ತೋರಿಸುತ್ತದೆ ಎಂದು ಹೇಳಿದೆ.
ಪಾಠ ಹೇಳಿ ಕೊಡುವ ನೆಪದಲ್ಲಿ ಬಾಲಕಿಯನ್ನು ಪುಸಲಾಯಿಸಿ, ಪದೆ ಪದೇ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಬೇರೆಯವರಲ್ಲಿ ತಿಳಿಸಿದರೆ ಕೊಲ್ಲುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತ ಬಾಲಕಿಯ ಪ್ರಾಸಿಕ್ಯೂಷನ್ ತಿಳಿಸಿದೆ.
ಸಂತ್ರಸ್ತ ಬಾಲಕಿ ಕೊನೆಗೂ ತನ್ನ ಮೇಲಿನ ದೌರ್ಜನ್ಯದ ಕುರಿತು ಶಿಕ್ಷಕಿ ಬಳಿ ಹೇಳಿಕೊಂಡಿದ್ದಾಳೆ. ಇದರಿಂದ ಆರೋಪಿ ಶಿಕ್ಷಕನ ಮೇಲೆ ಕೇಸ್ ದಾಖಲಿಸಲು ಸಾಧ್ಯವಾಗಿದೆ. ” ಇನ್ನು ಬಾಲಕಿಯ ವಯಸ್ಸಿನ ವಿರುದ್ಧ ಹಾಗೂ ನಂಬಿಕೆಯನ್ನು ಮುರಿದು ಕೃತ್ಯ ಎಸಗಿರುವುದಕ್ಕೆ ಆರೋಪಿ ಶಿಕ್ಷಕನಿಗೆ ಜಾಮೀನು ನೀಡಲು ಸಾಧ್ಯವಿಲ್ಲ”ಎಂದು ನ್ಯಾಯಾಲಯ ತಿಳಿಸಿದೆ.