ಬೀದರ್: ’ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಪ್ಪು ವರ್ಣದವರೆಂದು ಅವಮಾನಿಸಿ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಅಕ್ಷಮ್ಯ ಎಸಗಿದ್ದಾರೆ. ಅವರ ಹೇಳಿಕೆ ಖಂಡನಾರ್ಹ. ಮೇಲು, ಕೀಳು ಎಂದು ಜಾತಿ ದುರಹಂಕಾರದ ಮಾತುಗಳನ್ನು ಆಡಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಟೀಕಿಸಿದ್ದಾರೆ.
ಖರ್ಗೆಯವರು ಕಪ್ಪು ಬಣ್ಣದವರು, ಅವರಿಗೆ ತಲೆ ಕೂದಲಿನಿಂದಾಗಿ ಅಲ್ಪಸ್ವಲ್ಪ ಕಾಣುವಂತಿದ್ದಾರೆ’ ಎಂದು ಜ್ಞಾನೇಂದ್ರ ಮಾತಾಡಿರುವುದು ಹೀನಾಯ ಪ್ರವೃತ್ತಿಯ ಲಕ್ಷಣ. ಕಪ್ಪು ಬಣ್ಣದವರು ಎಂದರೆ ದಲಿತ/ಆದಿವಾಸಿ ಜಾತಿಯವರು, ಬಿಳಿ ಬಣ್ಣದವರೆಂದರೆ ಮೇಲು ಜಾತಿಯವರು ಎನ್ನುವ ಕೀಳು ಮನೋಭಾವ ಎದ್ದು ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.
ಆರಗ ಜ್ಞಾನೇಂದ್ರ ಸೇರಿದಂತೆ ಅನೇಕರು ಪೂಜಿಸುವ ಉಡುಪಿಯ ಕೃಷ್ಣನ ಬಣ್ಣ ಕಪ್ಪಲ್ಲವೇ? ಅವರ ಊರಾದ ತೀರ್ಥಹಳ್ಳಿಯ ಶ್ರೀ ರಾಮೇಶ್ವರ ಮಂದಿರದ ಶಿವಲಿಂಗ ಕಪ್ಪು ಬಣ್ಣದ್ದಲ್ಲವೇ? ಭಾರತದ ಹವಾಮಾನದ ಕಾರಣದಿಂದಾಗಿ ಇಲ್ಲಿ ಸಹಜವಾಗಿಯೇ ಬಹುಸಂಖ್ಯಾತ ಜನರ ಬಣ್ಣ ಕಪ್ಪು. ಮಾಜಿ ಸಚಿವರ ಈ ರೀತಿಯ ಕ್ಷುಲ್ಲಕ ಹೇಳಿಕೆಯಿಂದ ಅಸಂಖ್ಯ ಜನರಿಗೆ ಅಪಮಾನವಾಗಿದೆ ಎಂದು ತಿಳಿಸಿದ್ದಾರೆ.
ಕಸ್ತೂರಿರಂಗನ್ ವರದಿ ಇರುವುದು ಇಡೀ ವಿಶ್ವದಲ್ಲಿಯೇ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದ ಅರಣ್ಯ ಉಳಿಸಲು. ಇದು ಈ ದೇಶದ ಸರ್ವ ಸಮುದಾಯದ ಸಂಪತ್ತೇ ಹೊರತು ಯಾವುದೇ ಒಂದು ಜಿಲ್ಲೆಯ, ಪ್ರದೇಶದವರ ಖಾಸಗಿ ಆಸ್ತಿ ಅಲ್ಲ. ಇದನ್ನು ಉಳಿಸುವುದು ಈ ದೇಶದ ಎಲ್ಲ ನಾಗರಿಕರ ಮೂಲಭೂತ ಕರ್ತವ್ಯಗಳಲ್ಲಿ ಒಂದು. ಈ ವರದಿಯ ಬಗ್ಗೆ ವಿರೋಧ ಮಾಡುತ್ತಿರುವ ಆರಗ ಜ್ಞಾನೇಂದ್ರ ಅವರು ಪರಿಸರ ನಾಶದ ಮಾತು ಆಡಿದ್ದಾರೆ. ಅಂದರೆ ಅವರು ಸಂವಿಧಾನ ವಿರೋಧಿ ಮಾತುಗಳನ್ನು ಆಡಿದ್ದಾರೆ. ಈ ಹಿನ್ನೆಲೆಯಲ್ಲಿ ವರ್ಣಭೇದ ಮಾಡಿ, ಜನರಲ್ಲಿ ಅಶಾಂತಿ ಸೃಷ್ಟಿಸಲು ಕಾರಣರಾಗಿದ್ದಾರೆ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇದಕ್ಕಾಗಿ ಅವರು ಬಹಿರಂಗ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಹಿಂದೆ ಗೃಹಸಚಿವರಾಗಿ ಕೆಲಸ ಮಾಡಿರುವ ಆರಗ ಜ್ಞಾನೇಂದ್ರ ಅವರು ಈ ರೀತಿ ಮಾತನಾಡುತ್ತಾರೆ ಎಂದರೆ ಅದು ಅವರ ತಿಳಿವಳಿಕೆಯ ಕೊರತೆಯೋ ಅಥವಾ ಉತ್ತರ ಕರ್ನಾಟಕದ ಜನರ ಬಗ್ಗೆ ಅವರಿಗಿರುವ ಅಸಡ್ಡೆಯೋ ತಿಳಿಯುತ್ತಿಲ್ಲ. ತಾವು ಮಲೆನಾಡಿನ ಜನ ತುಂಬ ಶ್ರೇಷ್ಠರೂ, ಉತ್ತರ ಕರ್ನಾಟಕದವರು ಅಥವಾ ಕಲ್ಯಾಣ ಕರ್ನಾಟಕದವರು ದಡ್ಡರೂ ಎನ್ನುವ ಮನಃಸ್ಥಿತಿ ಅವರಿಗೆ ಇರಬಹುದು. ಇದು ಮಾನವೀಯತೆಗೆ ವಿರುದ್ಧವಾದ ನಡೆ ಎಂದು ಟೀಕಿಸಿದ್ದಾರೆ.
ಖರ್ಗೆಯವರು 50 ವರ್ಷಗಳ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಲಕ್ಷಾಂತರ ಜನರಿಗೆ ಅನುಕೂಲವಾಗಿದೆ. ಈ ಪ್ರದೇಶ, ರಾಜ್ಯ ಹಾಗೂ ದೇಶದ ಜನರಿಗೆ ಗೊತ್ತಿದೆ. ಅದನ್ನು ಅರಿಯದೆ ಮಾತನಾಡುವ ತಪ್ಪು ಯಾರೂ ಮಾಡಬಾರದು. ಅದನ್ನು ಜನಸಾಮಾನ್ಯರು ನಂಬುವುದಿಲ್ಲ. ಇನ್ನು, ಮಲೆನಾಡಿನ ಮೂಲದವರು ಮಾತ್ರ ಅರಣ್ಯ ಉಳಿಸ ಬಲ್ಲರೇ? ಕಡಿಮೆ ಮಳೆ ಬೀಳುವ ಪ್ರದೇಶದವರು ಅದೇ ಕೆಲಸ ಮಾಡಿದರೆ ಅದಕ್ಕೆ ಮಾನ್ಯತೆ ಇಲ್ಲವೇ? ಒಂದು ವೇಳೆ ಬರಗಾಲದ ಪ್ರದೇಶದವರು ಅರಣ್ಯ ಉಳಿಸುವ ಕೆಲಸ ಮಾಡಿದರೆ, ಅದಕ್ಕೆ ವಿರುದ್ಧವಾಗಿ ಮಲೆನಾಡು ಮೂಲದ ಮಾಜಿ ಸಚಿವರಾದ ಆರಗ ಜ್ಞಾನೇಂದ್ರ ಅವರಂತಹ ನಾಯಕರು ಅರಣ್ಯ ನಾಶ ಮಾಡಿದರೆ ಈ ದೇಶದ ಜನ, ಕಾನೂನು, ನ್ಯಾಯಾಲಯಗಳು ಸುಮ್ಮನೆ ಕಣ್ಣು ಮುಚ್ಚಿಕೊಂಡು ಇರಬೇಕೇ ಎಂದು ಪ್ರಶ್ನಿಸಿದ್ದಾರೆ.