ಛತ್ತೀಸ್ಗಢ: ಜೈನ ಸನ್ಯಾಸಿ ಆಚಾರ್ಯ ವಿದ್ಯಾಸಾಗರ ಮಹಾರಾಜ್ ಸಲ್ಲೇಖನ ವ್ರತ ಘೋಷಿಸಿ ದೇಹ ತ್ಯಾಗ ಮಾಡಿದ್ದಾರೆ. ಛತ್ತೀಸ್ಗಢದ ಡೊಂಗರಗಢದ ಚಂದ್ರಗಿರಿ ತೀರ್ಥದಲ್ಲಿ ಅವರು ಕೊನೆಯುಸಿರೆಳೆದರು. ಅವರ ಅಂತಿಮ ಸಂಸ್ಕಾರವನ್ನು ಇಂದು ಫೆಬ್ರವರಿ 18 ರ ಭಾನುವಾರ ಮಧ್ಯಾಹ್ನ 1 ಗಂಟೆಗೆ ನೆರವೇರಿಸಲಾಗುವುದು.
ಕಳೆದ ಕೆಲವು ದಿನಗಳಿಂದ ಆಚಾರ್ಯಶ್ರೀ ಅವರು ಅಸ್ವಸ್ಥರಾಗಿದ್ದರು. ಕಳೆದ ಮೂರು ದಿನಗಳಿಂದ ಅವರು ಆಹಾರ ಮತ್ತು ನೀರನ್ನು ಸಂಪೂರ್ಣವಾಗಿ ತ್ಯಜಿಸಿದ್ದರು.
ಆಚಾರ್ಯಶ್ರೀಗಳು ಕೊನೆಯ ಉಸಿರಿನವರೆಗೂ ಜಾಗೃತ ಸ್ಥಿತಿಯಲ್ಲಿದ್ದು ಮಂತ್ರಗಳನ್ನು ಪಠಿಸುತ್ತಲೇ ಇಹಲೋಕ ತ್ಯಜಿಸಿದರು. ಸಮಾಧಿಯ ಸಮಯದಲ್ಲಿ, ಪೂಜ್ಯ ಮುನಿಶ್ರೀ ಯೋಗಸಾಗರ ಜಿ ಮಹಾರಾಜ್, ಶ್ರೀ ಸಮತಾಸಾಗರ ಜಿ ಮಹಾರಾಜ್, ಶ್ರೀ ಪ್ರಸಾದಸಾಗರ್ ಜಿ ಮಹಾರಾಜ್ ಮತ್ತು ಸಂಘದವರು ಅವರೊಂದಿಗೆ ಉಪಸ್ಥಿತರಿದ್ದರು.
ಮಾಹಿತಿ ಸಿಕ್ಕ ತಕ್ಷಣ ಆಚಾರ್ಯಶ್ರೀಗಳ ಸಾವಿರಾರು ಶಿಷ್ಯರು ಡೊಂಗರಗಢಕ್ಕೆ ತೆರಳಿದ್ದಾರೆ. ಕಳೆದ ವರ್ಷ ನವೆಂಬರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್ಗಢದ ರಾಜನಂದಗಾಂವ್ನ ಡೊಂಗರ್ಗಢ್ನಲ್ಲಿರುವ ಜೈನ ಯಾತ್ರಾಸ್ಥಳ ಚಂದ್ರಗಿರಿಗೆ ಭೇಟಿ ನೀಡಿ ಜೈನ ಸಂತ ವಿದ್ಯಾಸಾಗರ ಮಹಾರಾಜರ ದರ್ಶನ ಪಡೆದಿದ್ದರು.
ದೇಶಾದ್ಯಂತ ಜೈನ ಸಮುದಾಯ ಮತ್ತು ಆಚಾರ್ಯಶ್ರೀ ಅವರ ಭಕ್ತರು ಅವರ ಗೌರವಾರ್ಥ ಇಂದು ತಮ್ಮ ಸಂಸ್ಥೆಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚಲು ನಿರ್ಧರಿಸಿದ್ದಾರೆ.
ರಾಜಕೀಯ ನಾಯಕರುಗಳಾದ, ದಿಗ್ವಿಜಯ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್, ಬಿಜೆಪಿ ನಾಯಕರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ.