ಉಡುಪಿ: ರಾಷ್ಟ್ರೀಯ ಹೆದ್ದಾರಿ- ಇಂದ್ರಾಳಿಯ ರೈಲ್ವೆ ಸೇತುವೆಯ ನಾಲ್ಕು ಬದಿಗಳಲ್ಲಿ ಸ್ತಂಭಗಳಿದ್ದು, ಅವುಗಳ ಮೇಲೆ ಅಶೋಕ ಸ್ತಂಭದ ಮೇಲಿರುವ ನಾಲ್ಕು ಸಿಂಹಗಳಿರುವ ಲಾಂಛನವನ್ನು ಪ್ರದರ್ಶಿಸಲಾಗಿದೆ. ಇದೀಗ ರಾಷ್ಟ್ರೀಯ ಲಾಂಛನವು ಬಳ್ಳಿಗಳಿಂದ ಆವರಿಸಿಕೊಂಡಿದ್ದು, ಕಬ್ಬಿಣದ ಸರಿಗೆಯಿಂದ ಕಟ್ಟಿ ಬಂಧಿಸಿಡಲಾಗಿದೆ.
ರಾಷ್ಟ್ರೀಯ ಲಾಂಛನವೆಂದು ಗೌರವಿಸಲ್ಪಡುವ ಲಾಂಛನ ಪ್ರತಿಕೃತಿಯು ವಿಕೃತಿ ಸ್ಥಿತಿಯಲ್ಲಿರುವುದು ಶೋಚನೀಯವಾಗಿದೆ. ಜಿಲ್ಲಾಡಳಿತ, ನಗರಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಲಾಂಛನವನ್ನು ಸಮಸ್ಯೆಗಳಿಂದ ತಕ್ಷಣ ಮುಕ್ತಪಡಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.