ಗೌಹಾತಿ ; ಇಲ್ಲಿಗೆ ಸಮೀಪದ ಚರೈಡಿಯೊ ಜಿಲ್ಲೆಯಲ್ಲಿ 5 ವರ್ಷದ ಪುಟ್ಟ ಬಾಲಕಿಯನ್ನು ಬಲಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಮಂತ್ರವಾದಿಯೊಬ್ಬನನ್ನು ಪೋಲೀಸರು ಬಂಧಿಸಿದ್ದಾರೆ. ತನ್ನ ಮನೆಯಲ್ಲಿ 5 ಜನ ಸಹೋದರ-ಸಹೋದರಿಯರ ನಡುವೆ ನೆಮ್ಮದಿಯಾಗಿ ಮಲಗಿದ್ದ ಪುಟ್ಟ ಬಾಲಕಿಯನ್ನು ಸೋಮವಾರ ನಡುರಾತ್ರಿಯಲ್ಲಿ ಯಾರೋ ಅಪಹರಿಸಿದ್ದಾರೆ. ಮರುದಿನ ಬೆಳಗ್ಗೆ ಬಾಲಕಿ ಕಾಣೆಯಾದಾಗ ಆಕೆಯ ಅಕ್ಕ ಸೆಫ್ರಾಯಿ ಪೋಲೀಸ್ ಠಾಣೆಯಲ್ಲಿ ಈ ಸಂಬಂಧ ಮಂಗಳವಾರ ದೂರು ನೀಡಿದ್ದಳು. ಅದೇ ದಿನ (ಮಂಗಳವಾರ) ರಾತ್ರಿ ಸಿಂಗ್ಲು ನದಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಕೆಂಪು ಬಟ್ಟೆಯಲ್ಲಿ ಭಸ್ಮ ಸೇರಿದಂತೆ ಮಂತ್ರವಾದಿಗಳು ಬಳಸುವ ಕೆಲವು ವಸ್ತುಗಳು ನದಿ ದಂಡೆಯಲ್ಲಿ ಪತ್ತೆಯಾಗಿವೆ. ಆದ್ದರಿಂದ ಇದು ನರಬಲಿಯ ಪ್ರಕರಣ ಇರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಂತ್ರವಾದಿಯನ್ನು ಬಂಧಿಸಲಾಗಿದ್ದು, ನರಬಲಿ ಮತ್ತು ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಿರಬಹುದಾದ ಮತ್ತೊಬ್ಬ ಹಿರಿಯ ಮಂತ್ರವಾದಿಯನ್ನು ಹುಡುಕುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಬಾಲಕಿಯ ತಂದೆ ತಾಯಿಯನ್ನು ಈಗಾಗಲೇ ಪ್ರಶ್ನಿಸಿರುವ ಪೋಲೀಸರು ತಂದೆ ಮತ್ತು ಇನ್ನಿತರ 10 ಜನರನ್ನು ಮತ್ತಷ್ಟು ಹೆಚ್ಚಿನ ವಿಚಾರಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
5 ವರ್ಷದ ಬಾಲಕಿಯ ನರ ಬಲಿ ಆರೋಪ ; ಮಂತ್ರವಾದಿಯ ಬಂಧನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.