ತಿರುಪತಿ: ತಿರುಪತಿ ಬೆಟ್ಟದಲ್ಲಿ ಚಿರತೆಗಳ ಕಾಟ ಹೆಚ್ಚಾಗಿದ್ದು ಭಕ್ತರಲ್ಲಿ ಆತಂಕ ಸೃಷ್ಟಿಯಾಗಿದೆ. ಸದ್ಯ ತಿರುಪತಿ ಬೆಟ್ಟದ ಕಾಲುದಾರಿಯಲ್ಲಿ ಮತ್ತೊಂದು ಚಿರತೆ ಸೆರೆಯಾಗಿದೆ. ಲಕ್ಷ್ಮೀನರಸಿಂಹಸ್ವಾಮಿ ದೇಗುಲದ ಬಳಿ ಚಿರತೆ ಸೆರೆಯಾಗಿದೆ. ತಿರುಪತಿ ಬೆಟ್ಟದ ಕಾಲ್ನಡಿಗೆ ಮಾರ್ಗದ 2850ನೇ ಮೆಟ್ಟಿಲು ಬಳಿ ಅರಣ್ಯ ಸಿಬ್ಬಂದಿ ಬೋನ್ ಇಟ್ಟಿದ್ದರು. ಸದ್ಯ ಚಿರತೆ ಬೋನ್ಗೆ ಬಿದ್ದಿದೆ.
ಈವರೆಗೂ ಅರಣ್ಯ ಸಿಬ್ಬಂದಿ ಆರು ಚಿರತೆಗಳನ್ನು ಸೆರೆಹಿಡಿದಿದ್ದಾರೆ. ಒಂದು ಚಿರತೆ ಸಿಗುತ್ತಿದ್ದಂತೆ ಅರಣ್ಯ ಇಲಾಖೆ ನಿಟ್ಟುಸಿರು ಬಿಟ್ಟರೆ ಮತ್ತೊಂದು ಚಿರತೆ ಕಾಣಿಸಿಕೊಳ್ಳುತ್ತಿದೆ. ಈ ಹಿಂದೆ ಸಿಕ್ಕ ಜಾಗದಲ್ಲೇ 6ನೇ ಚಿರತೆಯನ್ನೂ ಅರಣ್ಯ ಸಿಬ್ಬಂದಿ ಸೆರೆಹಿಡಿದಿದ್ದಾರೆ.
ಚಿರತೆಗಳ ಕಾಟ ಹೆಚ್ಚಾದ ಹಿನ್ನೆಲೆ ಕೆಲ ದಿನಗಳ ಹಿಂದೆಯೇ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ -ಟಿಟಿಡಿ ಉನ್ನತ ಮಟ್ಟದ ಸಭೆ ನಡೆಸಿ ಬೆಟ್ಟದ ಮೇಲಿನ ಮೆಟ್ಟಿಲುಗಳು ಮತ್ತು ಘಟ್ಟ ಪ್ರದೇಶದ ಮಾರ್ಗಗಳಲ್ಲಿ ಭಕ್ತರ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. 350 ಕ್ಕೂ ಹೆಚ್ಚು ಟ್ರ್ಯಾಪ್ ಕ್ಯಾಮೆರಾಗಳೊಂದಿಗೆ ಕಾಡು ಪ್ರಾಣಿಗಳ ಚಲನವಲನವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.