ತೆಲಂಗಾಣ: ತೆಲಂಗಾಣದ ಸೂರ್ಯಪೇಠ ಜಿಲ್ಲೆಯ ಮಠಮಪಲ್ಲಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬಡಚಿ ಗ್ರಾಮದ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.
ಇಂದು (.15) ಬೆಳಗಿನ ಜಾವ ಕಡಪ-ಚಿತ್ತೂರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರೂಸರ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಕ್ರೂಸರ್ನಲ್ಲಿದ್ದ ಬಡಚಿ ಗ್ರಾಮದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.
ಶೋಭಾ ಆಜೂರ (36), ಅಂಬಿಕಾ ಆಜೂರ (14), ಮಾನಂದಾ ಆಜೂರ (32), ಹನುಮಂತ ಆಜೂರ (42) ಚಾಲಕ ಹನುಮಂತ ಜಾಧವ (32) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು 11 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ರೂಸರ್ ವಾಹನ ಮಾಡಿಕೊಂಡು ಮೊದಲು ಶ್ರೀಶೈಲ ದರ್ಶನ ಪಡೆದು ಬಳಿಕ ತಿರುಪತಿಗೆ ತೆರಳಿದ್ದರು. ಬಳಿಕ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಇಂದು ಮನೆಗೆ ವಾಪಸ್ ಆಗುತ್ತಿದ್ದರು. ಆದರೆ ಈ ವೇಳೆ ಅಪಘಾತವಾಗಿದ್ದು, ಮನೆಗೆ ಬರುತ್ತಿದ್ದವರ ಪೈಕಿ ಐವರು ಮಸಣ ಸೇರಿದ್ದಾರೆ.