ಹೈದರಾಬಾದ್: ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನ ಪಾದಯಾತ್ರೆ ಮೂಲಕ ಸಾಗುವವರು ಈಗ ಕೋಲೊಂದನ್ನು ಹಿಡಿದು ಸಾಗುವುದು ಕಡ್ಡಾಯವಾಗಿದೆ.
ಕಳೆದ ವಾರ ದೇವಸ್ಥಾನಕ್ಕೆ ಪಾದಚಾರಿ ಮಾರ್ಗದಲ್ಲಿ 6 ವರ್ಷದ ಬಾಲಕಿಯನ್ನು ಚಿರತೆಯೊಂದು ಕೊಂದು ಹಾಕಿದ್ದು, ಈ ನಿಟ್ಟಿನಲ್ಲಿ ದೇವಾಲಯ ಆಡಳಿತ ಮಂಡಳಿ ಪಾದಯಾತ್ರೆ ಮಾರ್ಗದ ಮೂಲಕ ಬರುವ ಭಕ್ತರಿಗೆ ಕೆಲ ಮುನ್ನೆಚ್ಚರಿಕೆ ವಹಿಸುವಂತೆ ಹೇಳಿದೆ.
ಈಗ ಪಾದಚಾರಿ ಮಾರ್ಗದಲ್ಲಿ ಸಾಗುವ ಭಕ್ತರು 100 ಮಂದಿಯ ಬ್ಯಾಚ್ ಗಳಲ್ಲಿ ತೆರಳಬೇಕಾಗಿದ್ದು, ಭದ್ರತಾ ಸಿಬ್ಬಂದಿಯೂ ಇವರೊಂದಿಗೆ ತೆರಳುತ್ತಾರೆ.
ಕಾಡು ಪ್ರಾಣಿಗಳ ದಾಳಿಯ ಸಂದರ್ಭದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರತಿಯೊಬ್ಬ ಭಕ್ತರಿಗೆ ಕೋಲನ್ನು ಸಹ ನೀಡಲಾಗುತ್ತದೆ ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅಧ್ಯಕ್ಷ ಬಿ ಕರುಣಾಕರ್ ರೆಡ್ಡಿ ಹೇಳಿದ್ದಾರೆ.
ಪಾದಚಾರಿ ಮಾರ್ಗದಲ್ಲಿರುವ ಅಂಗಡಿಗಳವರಿಗೆ ಆಹಾರಗಳನ್ನು ಅಲ್ಲಲ್ಲಿ ಎಸೆಯದಂತೆ ಸೂಚಿಲಾಗಿದೆ. ಕೋತಿಗಳಿಗೆ ಆಹಾರ ನೀಡದಂತೆ ಭಕ್ತರಿಗೆ ತಿಳಿಸಲಾಗಿದೆ ಎಂದು ಟಿಟಿಡಿ ಅಧಿಕಾರಿ ತಿಳಿಸಿದ್ದಾರೆ.
ದೇವಾಲಯವು ಮೀಸಲು ಅರಣ್ಯ ಪ್ರದೇಶದಲ್ಲಿದ್ದು, ಪಾದಚಾರಿ ಮಾರ್ಗಕ್ಕೆ ಬೇಲಿ ನಿರ್ಮಿಸಲು ಅನುಮತಿ ನೀಡುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಪಾದಚಾರಿ ಮಾರ್ಗದ ಸುತ್ತಲೂ 30 ಮೀಟರ್ ಗೋಚರತೆಗಾಗಿ ಫೋಕಸ್ ಲೈಟ್ ಗಳನ್ನು ಅಳವಡಿಸಲಾಗುತ್ತಿದೆ. ಏಳನೇ ಮೈಲ್, ಗಾಳಿಗೋಪುರ, ಅಲಿಪಿರಿ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಕಾಡು ಪ್ರಾಣಿಗಳ ದಾಳಿಯ ಎಚ್ಚರಿಕೆಯ ಫಲಕವನ್ನು ಸಹ ಹಾಕಲಾಗುತ್ತದೆ.